ಮಂಗಳೂರು: ಖಾಸಗಿ ಬೀಚ್ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ನಲ್ಲಿ ಸಂಭವಿಸಿದೆ.
ಖಾಸಗಿ ಬೀಚ್ ರೆಸಾರ್ಟ್ ನಲ್ಲಿ ಈಜುತ್ತಿದ್ದ ಮೈಸೂರು ಮೂಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಮೈಸೂರಿನ ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ರಾಮಾನುಜ ರಸ್ತೆಯ ಕೆ.ಆರ್. ಮೊಹಲ್ಲಾ ನಿವಾಸಿ ಪಾರ್ವತಿ ಎಸ್. (20) ಮತ್ತು ವಿಜಯ ನಗರದ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನ ಎನ್.(21) ಎಂದು ಗುರುತಿಸಲಾಗಿದೆ.
ನಿನ್ನೆ ಬೆಳಗ್ಗೆ ಬೀಚ್ ರೆಸಾರ್ಟ್ ಗೆ ಬಂದು ಕೊಠಡಿ ಪಡೆದಿದ್ದ ಮೂವರು ವಿದ್ಯಾರ್ಥಿನಿಯರು, ಇಂದು ಬೆಳಿಗ್ಗೆ ಹತ್ತು ಗಂಟೆಗೆ ರೆಸಾರ್ಟ್ ನ ಈಜುಕೊಳದಲ್ಲಿ ಈಜಲು ತೆರಳಿದ್ದರು. ಈಜುಕೊಳದ ಒಂದು ಬದಿ ಆರು ಅಡಿಯಷ್ಟು ಆಳವಿದ್ದು, ಈ ವೇಳೆ ಈಜು ಬರದಿದ್ದ ಓರ್ವ ಯುವತಿ ಮುಳುಗಿದ್ದು ಉಳಿದ ಇಬ್ಬರು ರಕ್ಷಣೆ ತೆರಳಿದ್ದ ವೇಳೆ ಮೂವರೂ ಮುಳುಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಮೂವರು ಯುವತಿಯರೂ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯರಾಗಿದ್ದು ಘಟನೆ ಬಗ್ಗೆ ಮನೆಯವರಿಗೆ ಪೊಲೀಸರು ಮಾಹಿತಿ ರವಾನಿಸಿದ್ದಾರೆ.