ಬೆಳ್ತಂಗಡಿ: ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದ ಆಕಾಂಕ್ಷಿಗಳು ಪೈಪೋಟಿ ಮಾಡುವುದು ಮಾಮೂಲಿಯಾಗಿದೆ.
ಬೆಳ್ತಂಗಡಿ 2023 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಮೂವರು ಅಭ್ಯರ್ಥಿಗಳು ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಬೆಳ್ತಂಗಡಿಯ ಮಾಜಿ ಶಾಸಕರಾದ ಕೆ.ವಸಂತ ಬಂಗೇರ ಮತ್ತು ಮಾಜಿ ಸಚಿವರಾಗಿದ್ದ ಗಂಗಾಧರ ಗೌಡರವರು ಮಂಗಳವಾರ(ಇಂದು) ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಇಂದು ತಮ್ಮ ಕಾಂಗ್ರೆಸ್ ಪಕ್ಷದ ವಿವಿಧ ಘಟಕದ ಬೆಂಬಲಿಗರೊಂದಿಗೆ 1 ಬಸ್ ನಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಇನ್ನೂ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ನಲ್ಲಿ ಹೊಸ ಅಭ್ಯರ್ಥಿಯಾಗಿ ತಾಲೂಕಿನ ಜನರ ಮೆಚ್ಚಿಗೆ ಪಡೆದ ಯುವ ನಾಯಕ ಹಾಗೂ ಬೆಸ್ಟ್ ಫೌಂಡೇಷನ್ ನ ರಕ್ಷಿತ್ ಶಿವರಾಂ ಅವರು ಸೋಮವಾರ(ನಿನ್ನೆ) ಅರ್ಜಿ ಸಲ್ಲಿಸಿದ್ದಾರೆ.
ಈ ಬಾರಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಬಿ ಫಾರಂ ಯಾರ ಕೈಗೆ ಸಿಗಲಿದೆ ಎಂದು ಕಾದುನೋಡಬೇಕಾಗಿದೆ. ಕಾಂಗ್ರೆಸ್ ಪಕ್ಷವು ಟಿಕೆಟ್ಗಾಗಿ ಅರ್ಜಿಗೆ ₹ 5,000 ಶುಲ್ಕ ನಿಗಧಿಪಡಿಸಿದೆ ಹಾಗೂ ಅರ್ಜಿಯೊಂದಿಗೆ ₹ 2 ಲಕ್ಷ ಡಿಡಿ ನೀಡಬೇಕು ಎಂದು ಕಾಂಗ್ರೆಸ್ ಪಕ್ಷವು ಷರತ್ತು ವಿಧಿಸಿದೆ. ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.