ಉಡುಪಿ: ಮತ್ತೊಂದು ಗ್ಯಾಂಗ್ ವಾರ್ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದ್ದು, ಹೇರ್ ಕಟ್ಟಿಂಗ್ ಸಲೂನ್ ನೌಕರ ಬಚಾವಾಗಿರುವ ಘಟನೆ ನಡೆದಿದೆ.
ಉಡುಪಿ ನಗರದ ಪುತ್ತೂರಿನಲ್ಲಿ ಜೂನ್ 15 ರ ರಾತ್ರಿ ಘಟನೆ ನಡೆದಿದ್ದು, ಸಲೂನ್ ನೌಕರ ಸಿಗದಿದ್ದಕ್ಕೆ ಆತನ ಬೈಕ್ ಮೇಲೆ ತಲವಾರಿನಿಂದ ದಾಳಿ ಎಸಗಲಾಗಿದೆ.
ಶಬರಿ ಎಂಬಾತನಿಗೆ ಸಲೂನ್ ನೌಕರ ಚರಣ್ ಬೈದಿದ್ದು ಇದೇ ವಿಚಾರವಾಗಿ ಮಾತುಕತೆಗೆ ಕರೆದು ಕೊಲೆ ಯತ್ನ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಉಡುಪಿ ನಗರದ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಮಾತುಕತೆಗೆ ಎಂದು ಪ್ರವೀಣ್ ಮತ್ತು ತಂಡ ಚರಣ್ ನನ್ನು ಕರೆದಿದ್ದು, ತನ್ನ ಮೂವರು ಸ್ನೇಹಿತರ ಜೊತೆ ಚರಣ್ ಸ್ಥಳಕ್ಕೆ ತೆರಳಿದ್ದನು.
ಈ ವೇಳೆ ಪ್ರವೀಣ್ ಮತ್ತು ತಂಡ ತಲವಾರು ಬೀಸಿದ್ದರಿಂದ ಚರಣ್ ಮತ್ತು ಸ್ನೇಹಿತರು ತಮ್ಮ ಬೈಕ್ ಗಳನ್ನು ಬಿಟ್ಟು ಓಡಿ ಹೋಗಿ ತಪ್ಪಿಸಿಕೊಂಡಿದ್ದರು. ಆಗ ಚರಣ್ ಬೈಕ್ ಗೆ ತಲವಾರಿನಿಂದ ಹಾನಿಗೊಳಿಸಿದ್ದಾರೆ.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಅರೋಪಿಗಳಾದ ಅಭಿ, ಪ್ರವೀಣ್ ಕಟಪಾಡಿ, ದೇಶರಾಜ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.