ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2022ರ ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಆರಂಭಗೊಂಡಿದೆ .ಆದರೆ ಪ್ರತಿ ಬಾರಿ ಗಿಂತ ಈ ಬಾರಿ ಸುಮಾರು 2 ಗಂಟೆ ವಿಳಂಬವಾಗಿ ಜಂಬೂ ಸವಾರಿ ಮೆರವಣಿಗೆ ಆರಂಭವಾಗಲಿದೆ.
ಹೌದು, ಈ ಬಾರಿ ಚಾಮುಂಡಿ ದೇವಿಗೆ ಮಾಡುವ ಪುಷ್ಪಾರ್ಚನೆ ಸಂಜೆ 5.07 ರಿಂದ 5.18 ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅಂಬಾರಿಗೆ ಪೂಜೆ ಸಲ್ಲಿಯಾಗುವುದರಿಂದ ಮೆರವಣಿಗೆ ತಡವಾಗಿ ಆರಂಭವಾಗಲಿದೆ. ಸಂಜೆ 5.07 ರಿಂದ 5.18 ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಸಿಎಂ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಪುಷ್ಪಾರ್ಚನೆ ಮಾಡಲಿದ್ದಾರೆ.
ಮೈಸೂರು ಅರಮನೆಯಿಂದ ಆರಂಭಗೊಂಡು, ಕೆ ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಆರ್ ಎಂ ಸಿ, ತಿಲಕ್ ನಗರ ಮಾರ್ಗವಾಗಿ ಸಾಗಿ, ಬನ್ನಿ ಮಂಟಪ ತಲುಪಿ, ಅಲ್ಲಿಂದ ಮೈಸೂರು ಅರಮನೆಗೆ ಮರಳಲಿದೆ. ನಂದಿಧ್ವಜ, ವೀರಗಾಸೆ, ನಾದಸ್ವರ, ನೌಪತ್, ನಿಸಾನೆ ಆನೆಗಳು, ಎನ್’ಸಿಸಿ, ಸ್ಕೌಟ್ಸ್, ಗೈಡ್ಸ್, ವಿವಿಧ ಪೊಲೀಸ್ ತುಕಡಿಗಳು, ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿಂಬಿಸುವ 47 ಸ್ತಬ್ಧ ಚಿತ್ರಗಳು, 50 ಜನಪದ ಕಲಾತಂಡಗಳು ಸೇರಿದಂತೆ 100 ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.