ಬಂಟ್ವಾಳ: ಸಹಕಾರಿ ಬ್ಯಾಂಕ್ ಒಂದಕ್ಕೆ ನುಗ್ಗಿದ ಕಳ್ಳರು ಯಾವುದೇ ವಸ್ತುಗಳನ್ನು ಕೊಂಡು ಹೋಗಲು ಸಾಧ್ಯವಾಗದೇ ಬರಿಗೈಯಲ್ಲಿ ವಾಪಾಸು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ಧಕಟ್ಟೆ ಎಂಬಲ್ಲಿ ನಡೆದಿದೆ.
ಸಿದ್ಧಕಟ್ಟೆ ವ್ಯವಸಾಯ ಸಹಕಾರಿ ಸಂಘದ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಬ್ಯಾಂಕ್ ನೊಳಗೆ ಜಾಲಾಡಿ ಯಾವುದೇ ಪ್ರಯೋಜನವಿಲ್ಲದೆ ವಾಪಾಸು ಆದ ಘಟನೆ ವರದಿಯಾಗಿದೆ.
ಹಲವಾರು ವರ್ಷಗಳಿಂದ ನಂಬಿಕೆಯ ಬ್ಯಾಂಕ್ ಆಗಿರುವ ಸಿದ್ಧಕಟ್ಟೆ ಸಹಕಾರಿ ಬ್ಯಾಂಕ್ ನ ಎದುರಿನ ಶಟರ್ ನ್ನು ಪಿಕ್ಕಾಸು ಬಳಸಿ ಬೀಗ ಮುರಿದು ಬ್ಯಾಂಕ್ ಒಳಗೆ ಕಳ್ಳರು ನುಗ್ಗಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಬ್ಯಾಂಕ್ ಕಬಾಟು ಹಾಗೂ ಕ್ಯಾಶ್ ಕೌಂಟರ್ ನ್ನು ಜಾಲಾಡಿದ್ದಾರೆ. ಸೇಫ್ ಲಾಕರನ್ನು ಭದ್ರತೆಯ ಬ್ಯಾಂಕ್ ಆಗಿರುವುದರಿಂದ ಕಳ್ಳತನ ಮಾಡಲು ಸಾಧ್ಯವಾಗಿರಲಿಲ್ಲ. ಬೆಳಿಗ್ಗೆ, ಬ್ಯಾಂಕ್ ಸಮೀಪದ ಅಂಗಡಿಯವರು ನೋಡಿದಾಗ ಬ್ಯಾಂಕ್ ನ ಶಟರ್ ಮುರಿದು ಕಳ್ಳತನಕ್ಕೆ ಯತ್ನಿಸಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಬ್ಯಾಂಕ್ ನ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.