ಉಡುಪಿ; ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ಕಳ್ಳತನಕ್ಕೆ ಬಂದು ಮೂರ್ಛೆ ಹೋಗಿ ಕಳ್ಳ ಸಿಕ್ಕಿ ಬಿದ್ದ ಅಚ್ಚರಿಯ ಘಟನೆ ನಡೆದಿದೆ.
ಜುಲೈ 25ರ ಶುಕ್ರವಾರ ತಡರಾತ್ರಿ ಕೇರಳ ಮೂಲದ ಕಳ್ಳರಿಬ್ಬರು ದೇವಸ್ಥಾನದ ಹೆಬ್ಬಾಗಿಲಿನ ಬೀಗ ಮುರಿದು ಆರೋಪಿಗಳು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕಳ್ಳರ ಕೃತ್ಯ ಗಮನಿಸಿದ ದೇವಸ್ಥಾನದ ಕಾವಲುಗಾರ ಬೊಬ್ಬೆ ಹಾಕಿದ್ದಾರೆ. ಆಗ ಕಳ್ಳರು ಕಾವಲುಗಾರನಿಗೆ ಚಾಕು ತೋರಿಸಿ ಜೀವ ಬೆದರಿಕೆಯೊಡ್ಡಿ ಎಸ್ಕೇಪ್ ಆಗಿದ್ದಾರೆ. ಕೂಡಲೇ ಕಾವಲುಗಾರ ಸ್ಥಳೀಯ ಭಕ್ತರಿಗೆ ತಿಳಿಸಿದ್ದು, ತಕ್ಷಣ ದೇವಸ್ಥಾನದ ವಠಾರದಲ್ಲಿ ಸ್ಥಳೀಯರು ಒಟ್ಟಾಗಿದ್ದಾರೆ.
ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಕಳ್ಳರು ಬಂದಿರುವುದು ಹಾಗೂ ನಂತರ ಹೋಗಿರುವುದು ತಿಳಿದು ಬಂದಿದೆ. ತಕ್ಷಣ ಸ್ಥಳೀಯರು ಹುಡುಕಾಟ ನಡೆಸಿ ಕಡಿಯಾಳಿ ಪೆಟ್ರೋಲ್ ಬಂಕ್ ಬಳಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳರು ಓಡುತ್ತ ಸಾಗುವಾಗ ಓರ್ವ ಕಳ್ಳ ಮೂರ್ಛೆ ಬಂದು ಬಿದ್ದಿದ್ದಾನೆ. ಮೂರ್ಛೆ ಹೋಗಿರುವ ಕಳ್ಳನ ಉಪಚರಿಸುತ್ತಿದ್ದ ಮತ್ತೊಬ್ಬ ಕಳ್ಳನು ಓಡಲು ಯತ್ನಿಸಿದರೂ ಸಿಕ್ಕಿಬಿದ್ದಿದ್ದಾನೆ.
ಮೂರ್ಛೆ ರೋಗ ಉಲ್ಭಣಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಳ್ಳನಿಗೆ, ಸ್ಥಳೀಯರು ಕಳ್ಳತನಕ್ಕೆ ತಂದಿದ್ದ ಕಬ್ಬಿಣದ ಸಲಕರಣೆಗಳನ್ನು ಕೈಗೆ ನೀಡಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ಥಳೀಯರ ಸಹಕಾರದಿಂದ ಮೂರ್ಛೆ ಹೋಗಿರುವ ಕಳ್ಳನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಮತ್ತೊಬ್ಬ ಕಳ್ಳನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳರು ಕೇರಳ ಮೂಲದವರೆಂದು ತಿಳಿದು ಬಂದಿದೆ. ಇದೀಗ ಕಳ್ಳರು ಸಿಕ್ಕಿ ಬಿದ್ದದ್ದು ದೇವರ ಪವಾಡ ಎಂದು ಭಕ್ತರು ಹೇಳಿದ್ದಾರೆ.


