ಹಾಸನ: ಶಿರಾಡಿ ರಸ್ತೆ ಸಂಚಾರ ಬಂದ್ ಮಾಡುವ ಪ್ರಶ್ನೆಯೇ ಇಲ್ಲ. ಹಾಸನ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 2023ರ ಡಿಸೆಂಬರ್ ವೇಳೆಗೆ ಸಂಪೂರ್ಣ ಮುಗಿಸಲು ಸರಕಾರ ಸೂಚಿಸಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಹೇಳಿದ್ದಾರೆ.
2023ರ ಡಿಸೆಂಬರ್ ವೇಳೆಗೆ ಕಾಮಗಾರಿ ಮುಗಿಸಲು ಸರಕಾರ ಸೂಚಿಸಿದೆ. ಆದರೆ, 2024 ರ ಡಿಸೆಂಬರ್ ವೇಳೆಗೆ ರಸ್ತೆ ಕಾಮಗಾರಿ ಮುಗಿಸುತ್ತೇವೆ ಎಂದು ಗುತ್ತಿಗೆ ಕಂಪನಿ ಮುಖ್ಯಸ್ಥರು ಭರವಸೆ ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಮಾಹಿತಿ ನೀಡಿದರು.
ಮಳೆಯ ನಡುವೆಯೇ ಭರಾಪುರ, ಬಾಳ್ಳು ಪೇಟೆ, ಸಕಲೇಶ ಪುರದ ದೋಣಿಗಲ್ ಬಳಿ ಸೇರಿದಂತೆ ಹಲವೆಡೆ ಕಾಮಗಾರಿ ನಡೆಯುತ್ತಿರುವ ಸ್ಥಳ ವೀಕ್ಷಣೆ ಮಾಡಿದ ಸಚಿವ ಸಿ. ಸಿ. ಪಾಟೀಲ್, ರಸ್ತೆ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಲ್ಲಲ್ಲಿ ಕಾಮಗಾರಿ ಕಳಪೆಯಾಗಿದೆ ಎಂಬುದನ್ನು ಒಪ್ಪಿಕೊಂಡರು.
ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ 2017 ರಲ್ಲಿ ಪ್ರಾರಂಭವಾಗಿತ್ತು. ಗುತ್ತಿಗೆದಾರರ ಸಮಸ್ಯೆ, ಕೋವಿಡ್ ಕಾಟ, ಮಳೆ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಹೀಗಾಗಿ ಗುಣಮಟ್ಟವನ್ನ ಪರೀಕ್ಷಿಸಿ ವೇಗ ಹೆಚ್ಚಿಸಲು ತಾವು ಸ್ಥಳ ಪರಿಶೀಲನೆ ಮಾಡುತ್ತಿರೋಗಿ ಸಚಿವ ಸಿ. ಸಿ. ಪಾಟೀಲ್ ತಿಳಿಸಿದರು. ಅಲ್ಲದೆ ಕೆಲ ಸ್ಥಳಗಳಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ಈ ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಇನ್ನು ಮಳೆ ನಿಂತ ಕೂಡಲೇ ರಿಪೇರಿ ಕೆಲಸ ಪ್ರಾರಂಭಿಸುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ ಎಂದೂ ಸಚಿವರು ಮಾಹಿತಿ ನೀಡಿದರು.