ಕೊಡಗು:ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕೊಡಗಿನಲ್ಲಿ ಮತ್ತೆ ಪ್ರಾಕೃತಿಕ ವಿಕೋಪದ ಭೀತಿ ಶುರುವಾಗಿದೆ. ಇದರ ನಡುವೆಯೇ ಜಿಲ್ಲಾಡಳಿತವು ಇದೀಗ ಸಂಭಾವ್ಯ ವಿಪತ್ತು ಪ್ರದೇಶವನ್ನು ಗುರುತಿಸಿ ಪಟ್ಟಿ ಮಾಡಿದ್ದು, ಸ್ಥಳೀಯರಲ್ಲಿ ಆತಂಕ ಇಮ್ಮಡಿಯಾಗಿದೆ. ಅದರಲ್ಲೂ ಬೆಟ್ಟ ಪ್ರದೇಶ, ನದಿ ತೀರದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡಿರುವಂತೆ ಭಾಸವಾಗುತ್ತಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲೇ ಅಸುರಕ್ಷತೆ ಕಾಡುತ್ತಿದೆ. 1,584 ಚದರ ಮೈಲಿ ವಿಸ್ತ್ರೀರ್ಣ ಹೊಂದಿರುವ ಪುಟ್ಟ ನಗರದಲ್ಲಿ 2,011 ರ ಜನಗಣತಿಯಂತೆ ಮಡಿಕೇರಿ ನಗರದ ಜನಸಂಖ್ಯೆ ಒಟ್ಟು 33,381. ಈ ಸಣ್ಣ ನಗರದಲ್ಲಿಯೇ ಅಪಾಯಕಾರಿ ಎಂದು ಸುಮಾರು 171 ಮನೆಗಳನ್ನು ಜಿಲ್ಲಾಡಳಿತ ಗುರುತು ಮಾಡಿದೆ.
ಜಿಲ್ಲೆಯ 5 ತಾಲೂಕಿನ 10 ಹೋಬಳಿಯ 100 ಕಡೆಗಳಲ್ಲಿ ವಿಪತ್ತು ಸಂಭವಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಅವುಗಳನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಅಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾಡಳಿತವು ಈಗಾಗಲೇ 49 ಭೂ ಕುಸಿತ, 50 ಪ್ರವಾಹ, 1 ಅಂತರ್ಜಲದಿಂದ ಸಮಸ್ಯೆ ಉಂಟಾಗುವ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ್ದು, ಅಲ್ಲಿನ ಜನಸಂಖ್ಯೆ ಮಾಹಿತಿಯನ್ನು ಕಲೆ ಹಾಕಿದೆ.
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಜ್ಯೋತಿ ನಗರ, ಮಂಗಳಾದೇವಿ ನಗರ, ಸುಬ್ರಹ್ಮಣ್ಯ ನಗರ, ಮಲ್ಲಿಕಾರ್ಜುನ ನಗರ, ತ್ಯಾಗರಾಜ ಕಾಲನಿ, ಪುಟಾಣಿ ನಗರವನ್ನು ಸಂಭವನೀಯ ಭೂ ಕುಸಿತ ಪ್ರದೇಶ ಎಂದು ಗುರುತಿಸಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಚಾಮುಂಡೇಶ್ವರಿ ನಗರ, ಇಂದಿರಾ ನಗರ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದು, ಈ ಭಾಗದಲ್ಲಿಯೇ 171 ಮನೆಗಳನ್ನು ಅಪಾಯಕಾರಿ ಹಂತದಲ್ಲಿರುವ ಮನೆ ಎಂದು ಗುರುತಿಸಲಾಗಿದೆ.