ದೇಶದ ಜನಸಾಮಾನ್ಯರಿಗೆ ಮಂಗಳವಾರ ಚಂಡೀಗಢದಲ್ಲಿ ಆರಂಭವಾದ ಜಿಎಸ್ಟಿ ಮಂಡಳಿಯ 47ನೇ ಸಭೆ ಭಾರೀ ಆಘಾತ ನೀಡಿದೆ. ಗಾಯದ ಮೇಲೆ ಬರೆ ಎಳೆದಂತೆ ಮೊಸರು, ಗಿಣ್ಣ, ಜೇನುತುಪ್ಪ, ಮೀನು, ಮಾಂಸವನ್ನೂ ಜಿಎಸ್ಟಿ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.
ಅಲ್ಲದೆ, ಒಂದು ಸಾವಿರಕ್ಕಿಂತ ಕಡಿಮೆ ದಿನ ಬಾಡಿಗೆಯ ಹೋಟೆಲ್ ಕೊಠಡಿ, ಆಸ್ಪತ್ರೆಯ ವಾರ್ಡ್, ಅಂಚೆ ಸೇವೆ, ಬ್ಯಾಂಕ್ ಚೆಕ್ ಸೇವೆ, ರಕ್ತ ನಿಧಿ ಸೇವೆ, ಧಾರ್ಮಿಕ ಸೇವಾ ಕೇಂದ್ರಗಳು ಸೇರಿದಂತೆ ಈ ಮೊದಲು ಜಿಎಸ್ಟಿ ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟಿದ್ದ ಸೇವೆಗಳನ್ನು ಕೂಡ ಇದೀಗ ತೆರಿಗೆ ವ್ಯಾಪ್ತಿಗೆ ತರಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಹಾಗಾಗಿ ಪೆಟ್ರೋಲ್- ಡೀಸೆಲ್ನಿಂದ ಆರಂಭವಾಗಿ ಹಣ್ಣು ತರಕಾರಿಯವರೆಗೆ ಈಗಾಗಲೇ ದೇಶದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವ ದಿನಬಳಕೆ ವಸ್ತುಗಳ ಸಾಲಿಗೆ ಆಹಾರ ಪದಾರ್ಥ ಮತ್ತು ರಕ್ತನಿಧಿಯಂತಹ ಜೀವರಕ್ಷಕ ಸೇವೆಗಳೂ ಸೇರಲಿವೆ
ಮುಖ್ಯವಾಗಿ, ಮಾಂಸ, ಮೀನು, ಮೊಸರು, ಪನೀರ್, ಜೇನುತುಪ್ಪ, ಗಿಣ್ಣ, ಬೆಲ್ಲ, ಮಂಡಕ್ಕಿ, ಗೋಧಿ ಮತ್ತು ಮೆಸ್ಲಿನ್ ಹಿಟ್ಟು, ದ್ವಿದಳ ಧಾನ್ಯದಂತಹ ಪ್ಯಾಕ್ ಮಾಡಿ ಲೇಬಲ್ ಮಾಡಲಾಗಿರುವ ಆಹಾರ ಪದಾರ್ಥಗಳಿಗೆ ಈವರೆಗೆ ಜಿಎಸ್ಟಿ ವಿನಾಯ್ತಿ ನೀಡಲಾಗಿತ್ತು. ಆದರೆ, ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಆರಂಭವಾದ ಎರಡು ದಿನಗಳ ಜಿಎಸ್ ಟಿ ಮಂಡಳಿ ಸಭೆಯಲ್ಲಿ, ಈ ಪದಾರ್ಥಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ.
ಈ ಆಹಾರ ಪದಾರ್ಥಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕು ಎಂದು ಶಿಫಾರಸು ಮಾಡಿರುವುದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಲಹಾ ಸಮಿತಿ ಎಂಬುದು ಗಮನಾರ್ಹ.ಅದೇ ರೀತಿ ಬ್ಯಾಂಕಿಂಗ್ ವಲಯದ ಚೆಕ್ ಸೇವೆಗೆ ಶೇ.18ರ ತೆರಿಗೆ, ಒಂದು ಸಾವಿರ ರೂ. ಬಾಡಿಗೆ ಒಳಗಿನ ಹೋಟೆಲ್ ಕೊಠಡಿಗಳಿಗೆ ಶೇ.12ರ ತೆರಿಗೆ ಮತ್ತು ಐದು ಸಾವಿರಕ್ಕಿಂತ ಅಧಿಕ ದರದ ಆಸ್ಪತ್ರೆ ಕೊಠಡಿಗಳಿಗೂ ಜಿಎಸ್ ಟಿ ತೆರಿಗೆ ವಿಧಿಸಲು ಕೂಡ ಸಭೆಯಲ್ಲಿ ನಿರ್ಧರಿಸಲಾಗಿದೆ.