ಕಾರ್ಕಳ: ಹಾಡಹಗಲೇ ಮನೆಯೊಂದಕ್ಕೆ ಯಾರು ಇಲ್ಲದ ವೇಳೆ ಬಾಗಿಲು ಮುರಿದು ನುಗ್ಗಿದ ಕಳ್ಳರು ಮನೆಯನ್ನು ಜಾಲಾಡಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಸಮೀಪದ ಕಳತ್ರಪಾದೆ ಬಳಿ ನಡೆದಿದೆ.
ಗೋಪಾಲ ಪಾಂಡಿಬೆಟ್ಟ ಎಂಬವರ ಮನೆಯ ಬಾಗಿಲು ಮುರಿದು ನುಗ್ಗಿದ ಕಳ್ಳರು, ಕಳವು ಮಾಡಲು ಮನೆಯಲ್ಲಿ ಚಿನ್ನಾಭರಣ, ಹಣಕ್ಕಾಗಿ ಜಾಲಾಡಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಈ ಸಂಬಂಧ ಮನೆಯವರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಇದು ಮಿಯ್ಯಾರಿನಲ್ಲಿ ಎರಡನೇ ಪ್ರಕರಣವಾಗಿದ್ದು, ಪೊಲೀಸರು ರೌಂಡ್ಸ್ ಗೆ ಬಾರದೇ ಇರುವುದು, ಕಳ್ಳರಿಗೆ ಲಾಭವಾಗುತ್ತಿದೆ. ಮಿಯ್ಯಾರು ರೆಂಜಾಳ ಕಳತ್ರಪಾದೆಯಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಕಳ್ಳರ ಬಂಧನಕ್ಕೆ ಮುಂದಾಗಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಿಯ್ಯಾರು ಭಾಗದಲ್ಲಿ ಸೇಲ್ಸ್ ಮ್ಯಾನ್ ಗಳು ಗುಜಿರಿ ಮಾರಾಟ, ಹಾಗೂ ಆಶ್ರಮಗಳಿಗೆ ದಾನ ಕೇಳಿಕೊಂಡು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಈ ರೀತಿಯಾಗಿ ಬಂದು ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.