ಬಂಟ್ವಾಳ : ಇಷ್ಟು ದಿನ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ಇದೀಗ ಸಾಲು ಸಾಲು ದೇಗುಲದಳನ್ನು ಗುರಿಯಾಗಿಸಿಕೊಂಡಿವೆ. ಮೊನ್ನೆ ಫರಂಗಿಪೇಟೆ ಬಳಿ ದೇಗುಲವೊಂದರಲ್ಲಿ ಕಳ್ಳತನ ಮಾಡಿದ ಬೆನ್ನಲ್ಲೇ ನಿನ್ನೆ ತುಂಬೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದಾರೆ.
ದೇವಸ್ಥಾನದ ಮುಂಬಾಗಿಲಿನ ಚಿಲಕ ಮುರಿದು ಒಳಗೆ ನುಗ್ಗಿದ ಕಳ್ಳರು ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಮಂಗಳವಾರ ಮುಂಜಾನೆ ವೇಳೆಗೆ ಕಳವು ಮಾಡಿದ್ದಾರೆ.
ದೇವಸ್ಥಾನದ ಕಚೇರಿಯಲ್ಲಿರಿಸಿದ್ದ ಸುಮಾರು ಒಂದೂವರೆ ಕೆ.ಜಿ ತೂಕದ ಬೆಳ್ಳಿಯ ಜಲದ್ರೋಣ, ಗೊದ್ರೇಜ್ , ಕ್ಯಾಸ್ ಡ್ರಾಯರ್ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 50 ಸಾವಿರದಷ್ಟು ಹಣವನ್ನು ಕದ್ದಿದ್ದಾರೆ.
ದೇವಸ್ಥಾನದ ಸುತ್ತ ಮುಂಜಾಗ್ರತಾ ಕ್ರಮವಾಗಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆಯಾದರೂ ಕಳ್ಳರ ತಂಡ ಕ್ಯಾಮರಾ ಡಿ.ವಿ.ಆರ್ ನ್ನು ಕೂಡ ಬಿಡದೆ ಎಗರಿಸಿದ್ದಾರೆ. ನಿನ್ನೆ ಬೆಳಿಗ್ಗೆ ದೇವಸ್ಥಾನದ ಸಿಬ್ಬಂದಿಯೊರ್ವರು 6.ಗಂಟೆಗೆ ಬಂದಾಗ ಮುಂಬಾಗಿಲು ಚಿಲಕ ಮುರಿದಿದ್ದು ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ದೇವಸ್ಥಾನದ ಸೇವಾ ಸಮಿತಿಯ ಗೌರವಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆಯವರಿಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸ್ ನಿರೀಕ್ಷಕ ಶಿವಕುಮಾರ್, ಠಾಣಾಧಿಕಾರಿ ಹರೀಶ್, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.