ಉಪ್ಪಿನಂಗಡಿ; ಅನಧಿಕೃತವಾಗಿ ಕಟ್ಟಡ ತೆರವುಗೊಳಿಸಿದ್ದಕ್ಕೆ ಗ್ರಾಮ ಆಡಳಿತಾಧಿಕಾರಿಗೆ ಹಲ್ಲೆ ಮಾಡಿರುವ ಘಟನೆ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.
ಕೌಕ್ರಾಡಿ ಗ್ರಾಮದ ಸರ್ವೆ ನಂ.123/1ರ ಸರಕಾರಿ ಜಾಗದಲ್ಲಿ ರೇಣುಕಾ ಕೋಂ ವಿಶ್ವನಾಥ ಎಂಬವರು ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ನ.13ರಂದು ತೆರವು ಮಾಡಲಾಗಿತ್ತು. ಅದೇ ಸ್ಥಳದಲ್ಲಿ ಪುನಹ ಕಟ್ಟಡವನ್ನು ನಿರ್ಮಿಸುತ್ತಿರುವುದಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಡಿ.6ರಂದು ಗ್ರಾಮ ಆಡಳಿತಾಧಿಕಾರಿ ಸಿದ್ದಲಿಂಗ ಜಂಗಮ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಮುಂದಾದಾಗ ಅವರ ಮೇಲೆ ರೇಣುಕಾರವರ ತಂದೆ ಮುತ್ತುಸ್ವಾಮಿ ಮತ್ತು ಇತರರು ಹಲ್ಲೆ ಮಾಡಿದ್ದು, ಮನೆ ನಿರ್ಮಾಣವನ್ನು ಮುಂದುವರೆಸಿರುತ್ತಾರೆ ಎಂದು ದೂರಲಾಗಿದೆ.
ಗಾಯಗೊಂಡ ಗ್ರಾಮ ಆಡಳಿತಾಧಿಕಾರಿಯವರನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರಿ ಕರ್ತವ್ಯದಲ್ಲಿದ್ದ ನೌಕರನ ಮೇಲೆ ಹಲ್ಲೆ ಮಾಡಿರುವ ಆರೋಪಿತರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಪೊಲೀಸ್ ಉಪನಿರೀಕ್ಷಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕಡಬ ತಹಶೀಲ್ದಾರ್ ಅವರು ದ.ಕ.ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.