ಮಂಗಳೂರು: ಶಾಸಕ ಡಾ. ವೈ. ಭರತ್ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಕುರಿತು ಮಾತನಾಡಿದರು.
ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರವಸೆ ನೀಡಿ ಅಧಿಕಾರ ಪಡೆದಿದ್ದು, ಈಗ ರಾಜ್ಯವನ್ನು ದಿವಾಳಿ ಮಾಡಿದೆ. ಸಣ್ಣ ರೋಡು ಅಥವಾ ತೋಡು ಅಭಿವೃದ್ಧಿಗೂ ಹಣ ಇಲ್ಲದೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ದೂರಿದರು.
ಕಾಂಗ್ರೆಸ್ ಸರಕಾರವು ಗ್ಯಾರಂಟಿಗಳನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸದೆ ಜನರಿಗೆ ಮಂಕುಬೂದಿ ಎರಚಿದೆ. ಜಿಹಾದಿಯಾಗಿರಲಿ ದೇಶದ್ರೋಹಿ ಆಗಿರಲಿ, ಪಕ್ಷಕ್ಕೆ ಮತ ಸಿಕ್ಕಿದರೆ ಸಾಕು ಎಂಬ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಇಂಧನ ಉತ್ಪಾದನೆ ಸಾಕಷ್ಟು ಇದ್ದು ಉಳಿತಾಯ ಆಗುತ್ತಿದ್ದ ರಾಜ್ಯದಲ್ಲಿ ಈಗ ಇಂಧನ ಕೊರತೆ ಉಂಟಾಗಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲು ಸರ್ಕಾರ ಸಾಹಸ ಮಾಡುತ್ತಿದೆ. ವಿದ್ಯುತ್ ಅಭಾವದಿಂದ ಬಳ್ಳಾರಿಯ ಜೀನ್ಸ್ ಉದ್ಯಮ ಸಂಕಷ್ಟದಲ್ಲಿದೆ. ಟ್ಯಾಂಕರ್ ಮಾಫಿಯಾ ಜೊತೆಗೂಡಿ ನೀರಿನ ಸಮಸ್ಯೆ ಉಂಟುಮಾಡಿದೆ ಎಂದು ಅವರು ಹೇಳಿದರು.