ಮಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, 7ನೇ ತರಗತಿಯ ಪಠ್ಯದಲ್ಲಿ ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದ ಪಾಠದಲ್ಲಿ ಕಯ್ಯಾರ ಕಿಂಞಣ್ಣ ರೈ ಹೆಸರನ್ನು ಕೈಬಿಟ್ಟು ಮಂಜೇಶ್ವರ ಗೋವಿಂದ ಪೈ ಹೆಸರನ್ನು ಹಾಕಲಾಗಿದೆ.
ಪಠ್ಯ ಪರಿಷ್ಕರಣಾ ಸಮಿತಿಯ ಈ ನಡೆ ಕರಾವಳಿಯಲ್ಲಿ ಮತ್ತೊಂದು ವಿವಾದ ಹುಟ್ಟು ಹಾಕಿದೆ. ಏಳನೇ ತರಗತಿಯ ಈ ಹಿಂದಿನ ಪಠ್ಯದಲ್ಲಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿತ್ತು. ಆದರೆ ಪರಿಷ್ಕೃತ ಪಠ್ಯದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರನ್ನು ತೆಗೆದು ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಹೆಸರನ್ನು ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ.
7ನೇ ತರಗತಿಯ ಪಠ್ಯದಲ್ಲಿ ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದಗಳು ಪಾಠದಲ್ಲಿ ಕಯ್ಯಾರ ಕಿಂಞಣ್ಣ ರೈ ಅವರು ಕರ್ನಾಟಕದಲ್ಲಿ ಕಾಸರಗೋಡು ವಿಲೀನಗೊಳ್ಳಬೇಕೆಂದು ಕೊನೆಯವರೆಗೂ ಹೋರಾಡಿದ್ದರು ಎಂದು ಉಲ್ಲೇಖವಿತ್ತು. ಆದರೆ ಹೊಸ ಪಠ್ಯದಲ್ಲಿ ಕರ್ನಾಟಕದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರು ಕರ್ನಾಟಕದಲ್ಲಿ ಕಾಸರಗೋಡು ವಿಲೀನಗೊಳ್ಳಬೇಕೆಂದು ಕೊನೆಯವರೆಗೂ ಹೋರಾಡಿದ್ದರು ಎಂದು ತಿರುಚಲಾಗಿದೆ.