ಹೆಬ್ರಿ: ಪೀತುಬೈಲಿನಲ್ಲಿ ನಡೆದ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್ಕೌಂಟರ್ ಪ್ರದೇಶಕ್ಕೆ ಹಾಗೂ ಆತನ ನಿವಾಸಕ್ಕೆ ನಕ್ಸಲ್ ಪುನರ್ವಸತಿ ಮತ್ತು ಶರಣಾಗತಿ ಸಮಿತಿ ಭೇಟಿ ನೀಡಿ ಪರಿಶೀಲಿಸಿದ್ದು, ನಕ್ಸಲರ ಶರಣಾಗತಿಗೆ ಕರೆ ನೀಡಿದೆ.
ಸಮಿತಿ ಸದಸ್ಯ ನ್ಯಾಯವಾದಿ ಶ್ರೀಪಾಲ ಕೆ.ಪಿ. ಅವರು ಈ ಕುರಿತಂತೆ ಪೀತುಬೈಲಿನ ಆದಿವಾಸಿ ಕುಟುಂಬಗಳೊಂದಿಗೆ ಚರ್ಚಿಸಿದರು. ನಂತರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಜನರ ಸಮಸ್ಯೆ, ಮೂಲ ಸೌಲಭ್ಯ ಹಾಗೂ ಆದಿವಾಸಿ ಕುಟುಂಬದವರ ಸಮಸ್ಯೆಗಳ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಅಷ್ಟೇಅಲ್ಲದೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಇಲ್ಲಿನ ಎಲ್ಲ ವರದಿಗಳನ್ನು ಹಿರಿಯ ಅಧಿಕಾರಿಗಳಿಗೆ ನೀಡಿ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು. ಇನ್ನು ನಕ್ಸಲರು ಶರಣಾಗತಿ ಬಯಸುವವರು ಪುನರ್ವಸತಿ ಮತ್ತು ಶರಣಾಗತಿ ಸಮಿತಿಯನ್ನು ಸಂಪರ್ಕಿಸಿದರೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಲಾಗುವುದು,’ ಎಂದು ತಿಳಿಸಿದರು.
ನಕ್ಸಲ್ ಪುನರ್ವಸತಿ ಮತ್ತು ಶರಣಾಗತಿ ಸಮಿತಿಯವರು ಕಬ್ಬಿನಾಲೆ, ನಾಡ್ಪಾಲು, ಪೀತುಬೈಲು, ಕೂಡ್ಲು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದರು. ಪತ್ರಕರ್ತ ಪಾರ್ವತೇಶ್ ಬಿಳಿದಾಳೆ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.