ಮೂಡಬಿದಿರೆ: ಇಲ್ಲಿನ ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ನಲ್ಲಿರುವ ಐಕಳ ಹರೀಶ್ ಶೆಟ್ಟಿ ಎಂಬವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಗೆ ಮೂಡಬಿದಿರೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಕಳೆದ ಜನವರಿ ತಿಂಗಳಲ್ಲಿ ಘಟನೆ ನಡೆದಿದ್ದು, ಅರ್ಧ ಕಿಲೋ ಬಂಗಾರ ಸಹಿತ ಬೆಳ್ಳಿ ಆಭರಣಗಳನ್ನು ಕಳವುಗೈದಿದ್ದರು. ಗಂಭೀರ ಪ್ರಕರಣವಾಗಿದ್ದ ಕಾರಣ ಮಂಗಳೂರು ಸಿಸಿಬಿ ಪೊಲೀಸರಿಗೆ ಪ್ರಕರಣದ ತನಿಖೆ ವರ್ಗಾವಣೆಗೊಂಡಿತ್ತು.
ಸಿಸಿಬಿ ಪೊಲೀಸರು ಕಳೆದ ತಿಂಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇಬ್ಬರೂ ಆರೋಪಿಗಳ ಜಾಮೀನು ಮೂಡುಬಿದಿರೆ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಇತ್ತೀಚೆಗೆ ಮೂರನೇ ಆರೋಪಿ ಮಹಮ್ಮದ್ ಶರೀಫ್ನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಶರೀಫ್ಗೆ ಮೂಡಬಿದಿರೆ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿ ಶರೀಫ್ ಪರವಾಗಿ ಮಂಗಳೂರು ವಕೀಲರಾದ ವೇಣುಕುಮಾರ್, ಯುವರಾಜ್ ಮತ್ತು ಮೂಡಬಿದಿರೆ ವಕೀಲ ವೇಣುಗೋಪಾಲ್ ವಾದಿಸಿದ್ದರು.