ಮುಜಾಫರ್ಪುರ: ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ವಿರುದ್ಧ ಮುಂಬೈನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಹೋರಾಟಗಾರ ತಮನ್ನಾ ಹಶ್ಮಿ ಎನ್ನುವವರು ಕೇಸ್ ದಾಖಲು ಮಾಡಿದ್ದಾರೆ.
ಇದಕ್ಕೆ ಮುಖ್ಯ ಕಾರಣ, ಇವರೆಲ್ಲರೂ ಗುಟ್ಕಾ, ಪಾನ್ ಮಸಾಲಾ ಪ್ರಚಾರ ಮಾಡಿ ಯುವ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂಬ ಆರೋಪವಾಗಿದೆ. ಕಳೆದ ತಿಂಗಳು ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ಅವರು ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಜೊತೆಗೆ ಪಾನ್ ಮಸಾಲಾ ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ತೀವ್ರ ವಿರೋದ ವ್ಯಕ್ತವಾಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯನ್ನು ಯಾಚಿಸಿದ್ದರು. ಈ ಜಾಹೀರಾತಿನಿಂದ ಬರುವ ಎಲ್ಲಾ ಆದಾಯವನ್ನು ದೇಣಿಗೆ ನೀಡುವುದಾಗಿಯೂ ಹೇಳಿದ್ದರು. ನಟ ಯಶ್ ಸೇರಿದಂತೆ ಕೆಲವು ನಟರು ಎಷ್ಟೇ ದುಡ್ಡು ಕೊಟ್ಟರೂ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿ ಶಹಭಾಸ್ಗಿರಿ ಗಿಟ್ಟಿಸಿಕೊಂಡಿದ್ದರು. ಗ್ರೂಪ್ ಫೇಸುಕ್ ಯುಟ್ಯೂಬ್ ಈ ಜಾಹೀರಾತಿನಲ್ಲಿ ನಟಿಸುತ್ತಿರುವ ನಟರ ವಿರುದ್ಧ ಈ ಹಿಂದೆ ಭಾರಿ ಅಭಿಯಾನವೇ ಶುರುವಾಗಿತ್ತು.
ಐಎಎಸ್ ಅಧಿಕಾರಿಯೊಬ್ಬರು ಜಾಹೀರಾತಿನಲ್ಲಿ ನಟಿಸಿರುವ ನಟರ ವಿರುದ್ಧ ಛೀಮಾರಿ ಹಾಕಿ ಟ್ವಿಟ್ ಮಾಡಿದ್ದು, ಇದಕ್ಕೆ ಬೆಂಬಲಿಸಿ ಸಹಸ್ರಾರು ಮಂದಿ ಕಮೆಂಟ್ ಮಾಡಿದ್ದರು. ಎಷ್ಟೇ ಛೀಮಾರಿ ಹಾಕಿದರೂ ಇದರ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ತಮನ್ನಾ ಹಶ್ಮಿ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 467, 468, 439, ಮತ್ತು 120 ಬಿ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ಇದರ ವಿಚಾರಣೆ ನಡೆಸಲು ಕೋರ್ಟ್ ಒಪ್ಪಿಕೊಂಡಿದ್ದು, ವಿಚಾರಣೆಯನ್ನು ಮೇ 2 ನಿಗದಿ ಪಡಿಸಿದೆ ಎಂದು ಹಶ್ಮಿ ಹೇಳಿದ್ದಾರೆ.
ಈ ನಟರಿಗೆ ಲಕ್ಷಾಂತರ ಅನುಯಾಯಿಗಳಿದ್ದು, ಅವರ ಕಾರ್ಯಗಳಿಂದ ಪ್ರಭಾವಿತರಾಗುತ್ತಾರೆ. ಆದ್ದರಿಂದ ಯುಟ್ಯೂಬ್ ಗಳಲ್ಲಿ ನಟರು ಗುಟ್ಕಾ ತಿನ್ನುವುದನ್ನು ತೋರಿಸಿದಾಗ ಅದನ್ನು ಸೇವಿಸಲು ಪ್ರಾರಂಭಿಸುತ್ತಾರೆ. ಪ್ರತಿ ವರ್ಷ ಗುಟ್ಕಾದಿಂದ ಸಾವಿರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಮೊದಲು ಕಡಿಮೆ ಸಂಖ್ಯೆಯ ಜನರು ಇದಕ್ಕೆ ವ್ಯಸನಿಯಾಗಿದ್ದರು. ಆದರೆ, ಈಗ ಇದು ಹಲವಾರು ಪಟ್ಟು ಹೆಚ್ಚಾಗಿದೆ. ಜನರು ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಂಡರೂ ಈ ನಟರು ಅದನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.