ಬೆಂಗಳೂರು: ಬೆಂಗಳೂರಿನ ಗಾಂಧಿ ಭವನದಲ್ಲಿ ರೈತ ಚಳುವಳಿ ಆತ್ಮಾವಲೋಕನ ಸಭೆಯ ನಂತರ ನಡೆಯತ್ತಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಕೇಶ್ ಟಿಕಾಯತ್ ಅವರ ಮೇಲೆ ಪತ್ರಕರ್ತರ ಸೋಗಿನಲ್ಲಿ ಕುಳಿತಿದ್ದ ಒಂದಿಬ್ಬರು ಏಕಾ ಏಕಿ ಮಸಿ ತೂರಿ ಹಲ್ಲೆ ನಡೆಸಲು ಮುಂದಾದರು. ನಂತರ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ರೈತ ಸಂಘಟನೆಯ ಕಾರ್ಯಕರ್ತರ ಮೇಲೂ ಹಲ್ಲೆ ನಡೆಸಿದರು. ದಿಢೀರ್ ಉದ್ಭವವಾದ ಈ ಅಸಹಜ ಘಟನೆಯಿಂದ ರಾಷ್ಟ್ರೀಯ ರೈತ ಮುಖಂಡರು ಸೇರಿದಂತೆ ನೆರೆದಿದ್ದ ಎಲ್ಲರೂ ದಿಗ್ಪ್ರಮೆಗೊಳಗಾದರು
ಹೀಗೆ ಹಲ್ಲೆಮಾಡಿದ ಅಪರಿಚಿತ ವ್ಯಕ್ತಿಗಳು “ಮೋದಿ ಮೋದಿ” ಎಂದು ಕೂಗುತ್ತಿದ್ದದ್ದು ಏನೂ ಅರ್ಥವಾಗದ ಸ್ಥಿತಿ ನಿರ್ಮಿಸಿತ್ತು. ದಿಲ್ಲಿ ರೈತ ಚಳುವಳಿಯನ್ನು ಮೊಟಕುಗೊಳಿಸಲು ಅನೇಕ ಪ್ರಯತ್ನಗಳನ್ನು ಸರ್ಕಾರ ಮಾಡಿತ್ತಾದರೂ ಅಲ್ಲಿ ಮೂರ್ನಾಕು ರಾಜ್ಯಗಳಲ್ಲಿ ನಡೆದ ರೈತ ಮಹಾ ಪಂಚಾಯತ್ಗಳಲ್ಲಿ ಇಂಥ ಕ್ಷುಲ್ಲಕ ಘಟನೆಗಳು ನಡೆದಿರಲಿಲ್ಲ. ಇಷ್ಟಾಗಿಯೂ ದಿಲ್ಲಿ ಹೋರಾಟದ ಫಲವಾಗಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದದ್ದು ಆಯಿತು. ಇನ್ನು ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಮಾತು ಕೊಟ್ಟಿದ್ದು ಆಯಿತು. ಆದರೆ ಈಗ ದಿಲ್ಲಿ ಚಳವಳಿ ಮುಂಚೂಣಿಯಲ್ಲಿದ್ದ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಹಲ್ಲೆ ನಡೆಸಿರುವುದು ಅದೂ ಬೆಂಗಳೂರಿನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಹಲ್ಲೆ ನಡೆಸಿದವರು ಯಾರು? ಅವರ ಉದ್ದೇಶವೇನು? ಅವರ ಹಿನ್ನೆಲೆ ಏನು? ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಇದೀಗ ಕಿಡಿಗೇಡಿಗಳು ಪೊಲೀಸರ ವಶದಲ್ಲಿರುವುದು ತಿಳಿದು ಬಂದಿದೆ. ಕೂಡಲೆ ಅವರ ಉದ್ದೇಶ ಹಾಗೂ ಅವರಿಂದೆ ಇರುವ ಶಕ್ತಿಗಳ ಬಗ್ಗೆ ಪೊಲೀಸರು ತಿಳಿದುಕೊಂಡು ಸಾರ್ವಜನಿಕರಿಗೆ ತಿಳಿಸಬೇಕು ಎಂಬುದು ರೈತ ಹೋರಾಟಗಾರರ ಒತ್ತಾಯವಾಗಿದೆ. ಅಂತೆಯೇ ನಾಳೆ ಎಲ್ಲಾ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕಿಡಿಗೇಡಿಗಳು ಮಾಡಿದ ಕೃತ್ಯವನ್ನು ಖಂಡಿಸುವ ಪ್ರತಿಭಟನಾ ಸಭೆ ಹಾಗೂ ಮೆರವಣಿಗೆಗಳು ನಡೆಯಲಿವೆ ಎಂದು ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಕರೆ ನೀಡಿದ್ದಾರೆ.