ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಪಾಝಿಲ್ ಹತ್ಯೆ ತನಿಖೆಯ ಪ್ರಕರಣಕ್ಕೆ ಸಂಬಂಧಪಟ್ಟ ನೆಪದಲ್ಲಿ ರಾತ್ರಿ ಮನೆಗೆ ನುಗ್ಗಿ ಅಮಾಯಕರಿಗೆ ಕಿರುಕುಳ ನೀಡುವುದನ್ನು ಸಹಿಸಲಾಗದು. ಈ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಿ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಪೊಲೀಸ್ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಪ್ರಕರಣದ ಕುರಿತು ಗೃಹ ಸಚಿವರು ಈಗಾಗಲೇ ಸೂಕ್ತ ತನಿಖೆ ಮಾಡಲು ಆದೇಶ ನೀಡಿದ್ದಾರೆ. ಸಿಸಿ ಟಿವಿ ಸಾಕ್ಷಾಧಾರದಲ್ಲಿ ನೈಜ ಆರೋಪಿಗಳ ಪತ್ತೆಗೆ ವಿಶೇಷ ತಂಡ ಕಾರ್ಯಯೋನ್ಮುಖವಾಗಬೇಕು ಎಂದು ಒತ್ತಾಯಿಸಿ, ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು ಎಂದರು.
ಇನ್ನು ಸುರತ್ಕಲ್ ನಲ್ಲಿ ನಡೆದ ಹತ್ಯೆಯ ಕುರಿತಂತೆ ಕಾಂಗ್ರೆಸ್ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಅವರು ಕೋಮು ಭಾವನೆ ಕೆರಳಿಸುವ ರೀತಿ ಹೇಳಿಕೆಯನ್ನು ನೀಡಿರುವುದನ್ನು ಖಂಡಿಸುತ್ತೇನೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿರುವಾಗಲೇ ಮಾಜಿ ಶಾಸಕರು ದುಷ್ಕರ್ಮಿಗಳನ್ನು ಹಿಂದುಗಳು ಎಂಬ ಭಾವನೆಯಲ್ಲಿ ಮಾತನಾಡಿ ಕೋಮು ವೈಶಮ್ಯ ಕೆರಳಿಸುವ ಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮಾಜಿ ಸಚಿವರಾಗಿ ಯು.ಟಿ ಖಾದರ್ ಅವರು ಸಂಯಮದಿಂದ ವರ್ತಿಸಿ ಶಾಂತಿ ಸೌಹಾರ್ದತೆಗೆ ಸಹಕರಿಸಬೇಕು. ಪ್ರಚೋದನಾತ್ಮಕ ಹೇಳಿಕೆ ಸರಿಯಲ್ಲ ಎಂದು ಹೇಳಿದರು.