ಕಾರವಾರ: ರಾಜ್ಯದಲ್ಲಿ ಕಿಚ್ಚು ಹಚ್ಚಿರುವ ಹಿಜಾಬ್ ವಿವಾದ ಸಂಬಂಧ ಹಿಜಾಬ್ ಧರಿಸುವ ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ನಲ್ಲಿ ಪ್ರಬಲ ವಾದ ಮಂಡಿಸಿ ಗಮನ ಸೆಳೆದ ವಕೀಲ ದೇವದತ್ ಕಾಮತ್ಗೆ ರಾಮಕೃಷ್ಣ ಆಶ್ರಮದ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾರವಾರದ ಶ್ರೀರಾಮಕೃಷ್ಣ ಆಶ್ರಮದ ಶ್ರೀ ಭಾವೇಶಾನಂದ ಸ್ವಾಮೀಜಿ ಅವರು ಬೆಂಬಲ ಸೂಚಿಸಿದ್ದಾರೆ.
ಹಿಜಾಬ್ ಪರವಾಗಿ ವಾದಿಸಿದ ಕೂಡಲೇ ದೇವದತ್ ಕಾಮತ್ ಅವರನ್ನು ಹಿಂದೂ ವಿರೋಧಿ ಅನ್ನೋದು ಸರಿಯಲ್ಲ ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ. ವಕೀಲ ದೇವದತ್ ಕಾಮತ್ ಶ್ರೀ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿಯಾಗಿದ್ದ ನೆಲೆಯಲ್ಲಿ ಬೆಂಬಲ ನೀಡಿದ್ದಾರೆ. ಶಾಲಾ- ಕಾಲೇಜುಗಳಲ್ಲಿ ಧರ್ಮವನ್ನು ತರದೆ ಉತ್ತಮ ವಸ್ತ್ರಕ್ಕೆ ಆದ್ಯತೆ ನೀಡಲಿ ಎಂದು ಶ್ರೀ ಭಾವೇಶಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಶಾಲೆಗಳಲ್ಲಿ ಹಿಜಾಬ್- ಕೇಸರಿ ಶಾಲು ಬೇಡ, ವಿದ್ಯಾರ್ಥಿಗಳು ಮನುಷ್ಯರು ಹಾಕುವ ಬಟ್ಟೆ ಧರಿಸಿಕೊಂಡು ಬಂದ್ರೆ ಸಾಕು. ರಾಜಕೀಯ ಪಕ್ಷಗಳು ಹಿಜಾಬ್ ಹಾಗೂ ಕೇಸರಿ ಶಾಲನ್ನು ತಮ್ಮ ದಾಳವಾಗಿ ಬಳಸಿಕೊಳ್ಳುತ್ತಿವೆ. ಸರಕಾರ ನಿಗದಿಪಡಿಸಿದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕು. ಸಮವಸ್ತ್ರ ನಿಗದಿಪಡಿಸದ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅರ್ಧಂಬರ್ಧ ವಸ್ತ್ರ ಧರಿಸದಂತೆ ನೋಡಿಕೊಳ್ಳಬೇಕಿದೆ. ಮುಸ್ಲಿಂ ಮಹಿಳೆಯರು ಕೂಡಾ ರಾಮಕೃಷ್ಣ ಆಶ್ರಮಕ್ಕೆ ಬಂದು ನಮಾಜ್ ಮಾಡಿದ್ದಾರೆ. ಕುರಾನ್ ಕೂಡಾ ಓದಿದ್ದಾರೆ. ನಾವು ಎಲ್ಲಾ ಧರ್ಮೀಯರು ಯಾವುದೇ ಬೇಧ-ಭಾವವಿಲ್ಲದೇ ಇರಬೇಕು. ಶಾಲಾ- ಕಾಲೇಜುಗಳಲ್ಲಿ ಪೂಜೆ, ಪುನಸ್ಕಾರ, ನಮಾಜ್ ಯಾವ ಧರ್ಮಾಚರಣೆಯೂ ಬೇಡ ಎಂದ ಸ್ವಾಮೀಜಿ ತಿಳಿಸಿದ್ದಾರೆ.