ಶಿವಮೊಗ್ಗ: ಶಂಕಿತ ಉಗ್ರ ಮುನೀರ್ ಅಲಿಯಾಸ್ ಮಾಝ್ ತಂದೆ ಮನೀರ್ ಅಹಮದ್(57) ನಿನ್ನೆ ಮಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು, ಇಂದು ಅವರ ಅಂತ್ಯಕ್ರಿಯೆ ತೀರ್ಥಹಳ್ಳಿಯಲ್ಲಿ ನಡೆಯಿತು,
ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮ್ಯಾಜಿಸ್ಟ್ರೇಟ್ ಅನುಮತಿ ನೀಡಿದ ಹಿನ್ನೆಲೆ ಪೊಲೀಸ್ ಭದ್ರತೆಯೊಂದಿಗೆ ಮಾಝ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಕ್ಕೆ ಬಂದಿದ್ದ. ಆದರೆ ಮಗ ಮನೆಯೊಳಗೆ ಬರುತ್ತಿದ್ದಂತೆ ತಲೆ ಎತ್ತಿಯೂ ಆತನ ತಾಯಿ ನೋಡಲಿಲ್ಲ. ಪತಿಯ ಸಾವಿಗೆ ಮಗನೇ ಕಾರಣ ಎನ್ನುವ ಕಿಚ್ಚು ಹಾಗೂ ಮಗ ಉಗ್ರ ಸಂಘಟನೆ ಜತೆಗೆ ಗುರುತಿಸಿಕೊಂಡಿರುವುದರಿಂದ ಈ ಅಮ್ಮನ ನೋವಿಗೆ ಕಾರಣವಾಯಿತು.
ಈ ವೇಳೆ ತಂದೆಯ ಮೃತದೇಹ ನೋಡಿ ಮಾಝ್ ಕಣ್ಣೀರಿಟ್ಟಿದ್ದಾನೆ. ತನ್ನಿಂದಲೇ ತಂದೆಗೆ ಈ ಪರಿಸ್ಥಿತಿ ಬಂತು ಎಂದು ಗೋಳಾಡಿದ್ದಾನೆ. ಆದರೆ ತಾಯಿ ಮಾತ್ರ ಅವನತ್ತ ದೃಷ್ಟಿ ಎತ್ತಿ ನೋಡಲಿಲ್ಲ. ಮಾತ್ರವಲ್ಲದೇ ಸಂಬಂಧಿಕರೂ ಆತನನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದನ್ನೆಲ್ಲಾ ನೋಡಲು ಆಗದ ಮಾಜ್ ಅರ್ಧ ಗಂಟೆಯಷ್ಟೇ ಸ್ಥಳದಲ್ಲಿದ್ದು, ವಾಪಸ್ ಕರೆದೊಯ್ಯಲು ಪೊಲೀಸರಿಗೆ ಹೇಳಿದ್ದಾನೆ. ಸಂಜೆವರೆಗೂ ಅನುಮತಿ ಇದ್ದರೂ ಬೇಗನೇ ವಾಪಾಸ್ ತೆರಳಿದ್ದಾನೆ. ತಂದೆಯ ಅಂತ್ಯ ಸಂಸ್ಕಾರದಲ್ಲೂ ಆತ ಭಾಗಿಯಾಗಲಿಲ್ಲ. ಮಾಝ್ ಮಾಡಿದ ತಪ್ಪಿಗೆ ಸುಂದರ ಕುಟುಂಬವೊಂದು ಜೀವಮಾನವಿಡಿ ಕಣ್ಣೀರು ಇಡುವಂತಾಗಿದೆ.