
ಸುರತ್ಕಲ್: ಕಟ್ಟಡ ಒಂದಕ್ಕೆ ಶೀಟ್ ಮೇಲ್ಛಾವಣಿ ಹಾಕುವ ಕೆಲಸದಲ್ಲಿದ್ದಾಗ ಆಕಸ್ಮಿಕವಾಗಿ ಹೈಟೆನ್ಷನ್ ವಿದ್ಯುತ್ ತಂತಿ ತಾಗಿ ಗುತ್ತಿಗೆದಾರರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್ನಲ್ಲಿ ಸೋಮವಾರ ಸಂಜೆ ನಡೆದಿದೆ.
ಕೃಷ್ಣಾಪುರದ ಚಕ್ರವರ್ತಿ ಕ್ರೀಡಾಂಗಣದ ಬಳಿಯ ನಿವಾಸಿ, ಶೀಟ್ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಭಾಸ್ಕರ್ ಅಳಿಕೆ ಮೃತಪಟ್ಟ ದುರ್ದೈವಿ.
ಕೃಷ್ಣಾಪುರ 6ನೇ ಬ್ಲಾಕ್ನ ಅಪಾರ್ಟ್ಮೆಂಟ್ ಒಂದರಲ್ಲಿ ಕಬ್ಬಿಣದ ಶೀಟ್ ಅಳವಡಿಸುವ ಕೆಲಸ ಪ್ರಗತಿಯಲ್ಲಿತ್ತು. ಈ ವೇಳೆ ಭಾಸ್ಕರ್ ಅವರು ಕಬ್ಬಿಣದ ರಾಡ್ ಒಂದನ್ನು ಕಂಕುಳಲ್ಲಿ ಇಟ್ಟುಕೊಂಡು ಅಳತೆ ತೆಗೆದುಕೊಳ್ಳಲು ತಿರುಗಿದ್ದಾರೆ. ಆ ಕ್ಷಣದಲ್ಲಿ ಕಟ್ಟಡದ ತೀರಾ ಸಮೀಪದಲ್ಲೇ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ರಾಡ್ ಆಕಸ್ಮಿಕವಾಗಿ ಸ್ಪರ್ಶಿಸಿದೆ. ಪರಿಣಾಮ ಭಾರಿ ಪ್ರಮಾಣದ ವಿದ್ಯುತ್ ಪ್ರವಾಹ ಹರಿದು, ತೀವ್ರವಾಗಿ ಗಾಯಗೊಂಡ ಭಾಸ್ಕರ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿದ ತಕ್ಷಣ ಸುರತ್ಕಲ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


