ನವದೆಹಲಿ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಹಾಗೂ ಹಲವು ರಾಜ್ಯಗಳ ಹೈಕೋರ್ಟ್ಗಳಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿದೆ. ಮನೆಯಲ್ಲಿಯೇ ಕುಳಿತು ವಿಚಾರಣೆಗೆ ಹಾಜರಾಗುವ ವಕೀಲರ ಅಸಭ್ಯ ವರ್ತನೆ ಈಗಲೂ ಮುಂದುವರೆದಿದ್ದು, ಇದೀಗ ಇದು ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ.
ವಕೀಲರ ಇಂಥ ಕೃತ್ಯ ಕ್ಷಮಿಸಲಾಗದ್ದು ಎಂದಿದೆ. ಸುದರ್ಶನ್ ಟಿವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ವಕೀಲರೊಬ್ಬರು ಷರ್ಟ್ ಧರಿಸಿರಲಿಲ್ಲ. ಇದನ್ನು ಗಮನಿಸಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ಹಾಗೂ ಇಂದು ಮಲ್ಹೋತ್ರ ಅವರಿದ್ದ ಪೀಠವು ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಕೀಲರ ಕಾಯ್ದೆಯ ಅನ್ವಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವ ವಕೀಲರು ಸಮವಸ್ತ್ರ ಧರಿಸುವುದು ಕಡ್ಡಾಯ. ಆದರೆ ಹಲವಾರು ವಕೀಲರು ಬೇಜಬ್ದಾರಿಯಿಂದ ವರ್ತಿಸುತ್ತಿದ್ದಾರೆ. ನ್ಯಾಯಾಲಯದ ಬಗ್ಗೆ ವಕೀಲರ ಈ ರೀತಿಯ ವರ್ತನೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.ವಕೀಲರ ನಡವಳಿಕೆಗೆ ಬೇಸತ್ತ ಪೀಠ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.
ಕಳೆದ ಸೆಪ್ಟೆಂಬರ್ನಲ್ಲಿ ವಿಚಾರಣೆಯ ಸಮಯದಲ್ಲಿ ಸಿಗರೇಟ್ ಸೇದುತ್ತಿದ್ದ ವಕೀಲನಿಗೆ ಗುಜರಾತ್ ಹೈಕೋರ್ಟ್ ಹತ್ತು ಸಾವಿರ ರೂ. ದಂಡ ವಿಧಿಸಿತ್ತು. ಕಳೆದ ಏಪ್ರಿಲ್ನಲ್ಲಿ ರಾಜಸ್ಥಾನ ಹೈಕೋರ್ಟ್ ವಿಚಾರಣೆಗೆ ಆನ್ಲೈನ್ ಮೂಲಕ ಹಾಜರಾಗಿದ್ದ ವಕೀಲರೊಬ್ಬರು ಬನಿಯನ್ನಲ್ಲಿ ಕಾಣಿಸಿಕೊಂಡಿದ್ದರು.