ಸುಳ್ಯ: ಶಾಸಕರ ವಾರ್ ರೂಂ ಮತ್ತು ಸೇವಾ ಭಾರತಿ ಸುಳ್ಯ ನೇತೃತ್ವದಲ್ಲಿ ಸುಳ್ಯ ಮತ್ತು ಕಡಬ ತಾಲೂಕು ಒಳಗೊಂಡ ಸುಳ್ಯ ವಿಧಾನ ಕ್ಷೇತ್ರದಲ್ಲಿ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಇದುವರೆಗೆ ಒಟ್ಟು 23,300 ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಶಾಸಕರ ವಾರ್ ರೂಂ ಮತ್ತು ಸೇವಾ ಭಾರತಿ ವತಿಯಿಂದ ಸುಳ್ಯ ತಾಲೂಕಿನ ಪತ್ರಕರ್ತರಿಗೆ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಾರ್ ರೂಂ ಮೂಲಕವೂ ಕಿಟ್ ಗಳು ಬಂದಿದೆ. ವಿವಿಧ ಸಂಘ ಸಂಸ್ಥೆಗಳು, ದೇವಸ್ಥಾನಗಳು ಮತ್ತು ದಾನಿಗಳು ಕಿಟ್ ವಿತರಣೆಗೆ ಕೈ ಜೋಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಸಂಕಷ್ಟದಲ್ಲಿರುವ ಎಲ್ಲಾ ವಿಭಾಗಗಳನ್ನು ಹುಡುಕಿ ಅವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲು ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹಾಗು ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ನಗರ ಪಂಚಾಯಿತಿ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಸುಧಾಕರ, ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಪ್ರಮುಖರಾದ ಸುರೇಶ್ ಕಣೆಮರಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಮಹೇಶ್ ಕುಮಾರ್ ಮೇನಾಲ, ಸುನಿಲ್ ಕೇರ್ಪಳ, ಜಿನ್ನಪ್ಪ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.