ಬಂಟ್ವಾಳ: ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಸಾಲ ಮರುಪಾವತಿಗೆ ನೋಟಿಸ್ ಬಂದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ
ಬಂಟ್ವಾಳದ ಕಾವಳ ಮೂಡೂರು ಗ್ರಾಮದ ಪಂಜಾಡಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಗುರುಪ್ರಸಾದ್ ಪ್ರಭು ಅವರು ಆತ್ಮಹತ್ಯೆಗೆ ಯತ್ನಿಸಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಸಹಕಾರಿ ಸಂಘವೊಂದರ ಸಾಲದ ನೋಟಿಸ್ ಕಂಡು ಅಘಾತಗೊಂಡು ಆತ್ಮಹತ್ಯೆಗೈಯಲು ಪ್ರಯತ್ನಿಸಿದರೆಂದು ಆರೋಪಿಸಲಾಗಿದೆ.
ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಅವರಿಗೆ ಸಾಲ ಮರುಪಾವತಿಯ ಕುರಿತು ನೋಟಿಸ್ ಬಂದಿದ್ದು, ಆದರೆ ಬ್ಯಾಂಕಿನಲ್ಲಿ ಅವರ ಯಾವುದೇ ಸಾಲ ಇಲ್ಲ. ಈ ಕುರಿತು ಪುಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಇನ್ನು ಶನಿವಾರ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಕುಟುಂಬದ ಜತೆ ಮಾತುಕತೆ ನಡೆಸಿ ಧೈರ್ಯ ತುಂಬಿದ್ದಾರೆ.ಈ ವೇಳೆ ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುದರ್ಶನ್ ಬಜ, ಅಜಿತ್ ಶೆಟ್ಟಿ ಮೊದಲಾದವರು ಜತೆಗಿದ್ದರು.