ಸುಳ್ಯ; ಬ್ಯಾಂಕ್ ನಿಂದ ತೆಗೆದ ಸಾಲವನ್ನು ಕಟ್ಟಲಾಗದೇ ವ್ಯಕ್ತಿಯೊಬ್ಬರು ಬ್ಯಾಂಕೊಳಗೆ ನುಗ್ಗಿ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಬ್ಯಾಂಕ್ ನ ಒಳಗೆ ಆತಂಕ ಮೂಡಿಸಿದ ವ್ಯಕ್ತಿಯನ್ನು ಪೊಲೀಸರು ಸಕಾಲಕ್ಕೆ ಆಗಮಿಸಿ ಆತನ ವಾಹನ ಸಹಿತ ಠಾಣೆಗೆ ಕರೆದೊಯ್ದಿದ್ದಾರೆ.
ಇಂದು ಸುಳ್ಯದ ರಥಭೀದಿಯಲ್ಲಿರುವ ಖಾಸಗಿ ಬ್ಯಾಂಕ್ ಗೆ ಮುಂಜಾನೆ ಬಂದಿದ್ದ ವ್ಯಕ್ತಿ ತಾನು ಪಡೆದಿರುವ ಸಾಲದ ಕಂತಿನ ವಿಚಾರದಲ್ಲಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಕೈಯಲ್ಲಿದ್ದ ಪೆಟ್ರೋಲ್ ಕ್ಯಾನ್ ನಿಂದ ಪೆಟ್ರೋಲ್ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದಲ್ಲದೆ, ನೋಡ ನೋಡುತ್ತಿದ್ದಂತೆ ಪೆಟ್ರೋಲ್ ಚೆಲ್ಲಿ ಸಿಗರ್ ಲೈಟರ್ ನಿಂದ ಬೆಂಕಿ ಹಚ್ಚಲು ಯತ್ನಿಸಿದ್ದಾನೆ.
ಕೂಡಲೇ ಬ್ಯಾಂಕಿನ ಸಿಬ್ಬಂದಿ ಆತನನ್ನು ತಡೆದು ಪೋಲಿಸರಿಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ. ಆಸ್ತಿ ಖರೀದಿಗೆ ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದು ಹಲವು ಕಂತು ಬಾಕಿಯಾಗಿತ್ತು ಎನ್ನಲಾಗುತ್ತಿದೆ. ಹೀಗಾಗಿ ಬ್ಯಾಂಕ್ ನವರು ಆಸ್ತಿ ಮುಟ್ಟುಗೂಲು ಹಾಕಲು ಮುಂದಾಗಿದ್ದರು. ಇದೇ ಭಯದಲ್ಲಿ ಹೈಡ್ರಾಮಾ ಸೃಷ್ಟಿ ಮಾಡಿದ್ದಾನೆ ಎನ್ನಲಾಗಿದೆ.