ಉಡುಪಿ: ಕ್ಲೀನ್ ಸಿಟಿ ಎಂದು ಪ್ರಶಸ್ತಿ ಪಡೆದಿರುವ ಉಡುಪಿ ನಗರಸಭೆ ವ್ಯಾಪ್ತಿಯಲ್ಲೇ ಹರಿಯುವ ಇಂದ್ರಾಣಿ ನದಿಗೆ, ಮಠದಬೆಟ್ಟುವಿನಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಗಾಗಿ ತ್ಯಾಜ್ಯ ನೀರನ್ನು ತಡೆ ಹಿಡಿಯಲಾಗಿದೆ. ಪರಿಣಾಮ ಈ ಪರಿಸರದ ಸುಮಾರು 30ಕ್ಕೂ ಅಧಿಕ ಮನೆಗಳ ಬಾವಿಗಳು ಕಲುಷಿತಗೊಂಡಿವೆ.
ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ವಾರ್ಡಿನ ಮಠದಬೆಟ್ಟು ಎಂಬಲ್ಲಿ ಇಂದ್ರಾಣಿ ಹೊಳೆಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲು ಪಶ್ಚಿಮ ವಾಹಿನಿ ಯೋಜನೆಯಡಿ ಒಂದು ಕೋಟಿ ರೂ. ಅನುದಾನ ಮಂಜೂರಾಗಿದೆ., ಅದರಂತೆ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ. ಅದಕ್ಕಾಗಿ ಹೊಳೆಗೆ ಮಣ್ಣು ಹಾಕಿ ನೀರನ್ನು ತಡೆ ಹಿಡಿಯಲಾಗಿದೆ. ಇನ್ನೊಂದೆಡೆ ನಗರಸಭೆಯಿಂದ ಡ್ರೈನೇಜ್ ನೀರನ್ನು ಇದೇ ಹೊಳೆಗೆ ಬಿಡಲಾಗುತ್ತಿದೆ. ಇದರಿಂದ ಸೇತುವೆ ನಿರ್ಮಾಣದ ಪ್ರದೇಶದಲ್ಲಿ ಡ್ರೈನೇಜ್ ನೀರು ಸಂಗ್ರಹ ಗೊಂಡಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೊಳೆಯ ನೀರು ಹೆಚ್ಚಾಗಿ, ತ್ಯಾಜ್ಯ ನೀರು ಹೊಳೆಯನ್ನು ಸಂಪರ್ಕಿಸುವ ತೋಡುಗಳಲ್ಲಿ ಹರಿಯುತ್ತಿದೆ.
ಇದರ ಪರಿಣಾಮವಾಗಿ ಮಠದಬೆಟ್ಟು ಪರಿಸರದ ಸುಮಾರು 30ಕ್ಕೂ ಅಧಿಕ ಮನೆಗಳ ಬಾವಿಯ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿ ಮಲೀನ ಗೊಂಡಿವೆ. ಬಾವಿಯ ನೀರಿನಲ್ಲಿ ತ್ಯಾಜ್ಯ ನೀರು ಸೇರಿರುವುದರಿಂದ ನೀರಿನ ಮಟ್ಟ ಕೂಡ ಜಾಸ್ತಿಯಾಗಿದೆ. ಬೇಸಿಗೆಯಲ್ಲಿ ನಗರಸಭೆ ನೀರು ಬಾರದೆ ಇದ್ದಾಗ ಸ್ಥಳೀಯರು ತಮ್ಮ ಬಾವಿಯ ನೀರನ್ನು ಬಳಸುತ್ತಿದ್ದರು. ಆದರೆ ಈ ಬಾರಿ ತ್ಯಾಜ್ಯ ನೀರಿನಿಂದಾಗಿ ಬಾವಿಯ ನೀರು ದಿನಬಳಕೆಗೆ ಯೋಗ್ಯವಾಗಿಲ್ಲ. ಇಷ್ಟಾದರೂ ಕೂಡ ನಗರದ ಮಧ್ಯ ಭಾಗದಲ್ಲೇ ಇರುವ ನಮ್ಮ ನರಕಯಾತನೆ ಬಗ್ಗೆ ಯಾರು ಕೇಳುತ್ತಿಲ್ಲ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ಚುನಾವಣೆಯನ್ನು ನಾವೆಲ್ಲ ಬಹಿಷ್ಕರಿಸುವ ತೀರ್ಮಾನ ಮಾಡಿದ್ದೇವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಾವಿಯ ನೀರು ಮಲಿನ ಗೊಂಡ ಪರಿಣಾಮ ಪರಿಸರದ ಹಲವರಿಗೆ ವಿವಿಧ ಕಾಯಿಲೆಗಳು ಕಂಡುಬಂದಿದೆ. ಮಕ್ಕಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸೊಳ್ಳೆಯಿಂದ ರಾತ್ರಿ ಮಲಗಲು ಕೂಡ ಆಗುತ್ತಿಲ್ಲ. ಒಂದೆರೆಡು ಮಳೆಯಲ್ಲಿ ಹೊಳೆಯ ನೀರಿನ ಮಟ್ಟ ಹೆಚ್ಚಾಗಿದ್ದು, ಮುಂದೆ ನಿರಂತರ ಮಳೆ ಬಂದರೆ ಈ ಮಲಿನ ನೀರು ಮನೆಗಳ ಒಳಗೆ ನುಗ್ಗುವ ಅಪಾಯವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.