ಕೋಟ: ಮೆಹೆಂದಿ ಕಾರ್ಯಕ್ರಮದ ವೇಳೆ ಕೊರಗ ಸಮುದಾಯದ ಮೇಲೆ ಪೊಲೀಸ್ ಸಿಬ್ಬಂದಿ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕೋಟ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂತೋಷ್ ಅವರನ್ನು ಅಮಾನತುಗೊಳಿಸಲಾಗಿದೆ.
ಪಶ್ಚಿಮ ವಲಯದ ಐಜಿಪಿ ಈ ಆದೇಶ ಹೊರಡಿಸಿದ್ದಾರೆ. ಕೊರಗ ಸಮುದಾಯದವರ ಮೇಲೆ ನಿಷ್ಕರುಣೆಯಿಂದ ಲಾಠಿ ಪ್ರಹಾರ ನಡೆಸಿದ ಐವರು ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ.
ಡಿ.27ರ ಸೋಮವಾರ ರಾತ್ರಿ ಕೋಟತಟ್ಟು ಗ್ರಾಮದಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಸಂಗೀತದ ಸದ್ದು ಕೇಳಿಸುತ್ತಿದೆ ಎಂಬ ಆರೋಪದ ಮೇಲೆ ಕೋಟ ಠಾಣೆಯ ಪೊಲೀಸರು ಕೊರಗ ಸಮುದಾಯದವರ ಮೇಲೆ ಲಾಠಿ ಪ್ರಹಾರ ಮಾಡಿದ್ದರು. ಕಾರ್ಯಕ್ರಮವು ನೆರೆಹೊರೆಯವರಿಗೆ ತೊಂದರೆ ಉಂಟುಮಾಡಿತು. ಜತೆಗೆ ಕಾರ್ಯಕ್ರಮದಲ್ಲಿ ವರ ಸೇರಿದಂತೆ ಯುವಕರ ಬಟ್ಟೆಗಳನ್ನೂ ಪೊಲೀಸರು ತೆಗೆದು ತೀವ್ರವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಕೊರಗ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರು ಮಂಗಳವಾರ ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಅವರು ಐಜಿಪಿಗೆ ನೀಡಿದ ವರದಿಯನ್ನು ಆಧರಿಸಿ, ಸಬ್ ಇನ್ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.