ಬೆಳ್ತಂಗಡಿ: ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಜಪ್ತಿಗೆ ಸಾಲ ವಸೂಲಾತಿ ಪ್ರಾಧಿಕಾರ ಒಂದು ತಿಂಗಳ ಕಾಲಾವಕಾಶ ನೀಡಿರುವುದರಿಂದ ಕಾಂಪ್ಲೆಕ್ಸ್ ನಲ್ಲಿದ್ದ ಬಾಡಿಗೆದಾರರು ಕೊಂಚ ನಿರಾಳರಾಗಿದ್ದಾರೆ.
ಕಟ್ಟಡ ನಿರ್ಮಾಣ ಮಾಡಲು ಮುಂಬಯಿ ಮೂಲದ ಬ್ಯಾಂಕ್ ನಿಂದ ಪಡೆದ ಸಾಲವನ್ನು ಮರುಪಾವತಿಸದೇ ಇದ್ದುದರಿಂದ ಕಟ್ಟಡವನ್ನು ಇಂದು 11 ಗಂಟೆಗೆ ಪಡೆದುಕೊಳ್ಳುವ ಬಗ್ಗೆ ಬ್ಯಾಂಕ್ ನೋಟಿಸ್ ಜಾರಿಗೊಳಿಸಿತ್ತು. ಆದರೆ ಒಂದು ತಿಂಗಳವರೆಗೆ ಜಪ್ತಿ ಮಾಡದಂತೆ ಸಾಲ ವಸೂಲಾತಿ ಪ್ರಾಧಿಕಾರ ತಡೆಯಾಜ್ಞೆ ನೀಡಿದೆ.
ಏನಿದು ಪ್ರಕರಣ?
ಬೆಳ್ತಂಗಡಿ ನಗರದ ಕಲ್ಲಗುಡ್ಡೆ ಬಳಿ ಇರುವ ರವಿ ಕುಮಾರ್ ಎಂಬವರು “ವಿಘ್ನೇಶ್ ಕನ್ಟ್ರಕ್ಷನ್ ” ಪಿಡಬ್ಲ್ಯೂ ಗುತ್ತಿಗೆ ಮತ್ತು ಅರ್ಥ್ ಮೂವರ್ಸ್ ನಡೆಸುತ್ತಿರುವ ಇವರು ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ “ವಿಘ್ನೇಶ್ ಸಿಟಿ “ಎಂಬ ಹೆಸರಿನ ಕಟ್ಟಡಕ್ಕೆ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಬಡ್ಡಿ ಅಸಲು ಸೇರಿ ಸುಮಾರು ಆರೂವರೆ ಕೋಟಿ ಹಣವನ್ನು ಬ್ಯಾಂಕ್ ಗೆ ಮರುಪಾವತಿ ಮಾಡದಿರುವುದರಿಂದ ಕಟ್ಟಡ ಜಪ್ತಿ ಮಾಡಲು ಬ್ಯಾಂಕಿಗೆ ಕೋರ್ಟ್ ಆದೇಶಿಸಿತ್ತು. ಹಾಗಾಗಿ ಅಂಗಡಿ ಕೋಣೆ ಬಿಡಲು ಎಲ್ಲಾ ಬಾಡಿಗೆ ಹೊಂದಿರುವ ಮಾಲೀಕರಿಗೆ ಮಂಗಳೂರು ಕೋರ್ಟ್ ಮುಖಾಂತರ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಹಚ್ಚಿ ಹೋಗಿದ್ದರು.
NKGSB co-op ಬ್ಯಾಂಕ್ ನಿಂದ ಸಾಲ:
ಮುಂಬಯಿ ಮೂಲದ NKGSB Co-op ಬ್ಯಾಂಕ್ ಲಿಮಿಟೆಡ್ ನ ಮಂಗಳೂರು ಶಾಖೆಯಿಂದ ಸುಮಾರು ನಾಲ್ಕೂವರೆ ಕೋಟಿ ಕಟ್ಟಡಕ್ಕೆ ಸಾಲ ಪಡೆದು ಮರುಪಾವತಿಸದೇ ಇದ್ದುದರಿಂದ ಮಂಗಳೂರು ಪ್ರಿ ಸೀನಿಯರ್ ಸಿವಿಲ್ ಜಡ್ಜ್ ಕೋರ್ಟ್ನಿಂದ ಕಮೀಷನರ್ ನೇಮಿಸಿ ವಾರೆಂಟ್ ಹೊರಡಿಸಿದ್ದು ಎಲ್ಲಾ ಅಂಗಡಿ ಕೋಣೆ ಬಾಡಿಗೆದಾರರ ಅಂಗಡಿಯ ಮುಂದೆ ನೋಟಿಸ್ ಅಂಟಿಸಿತ್ತು .
ಇಂದು ಜಪ್ತಿಗೆ ನಿಗದಿಯಾಗಿತ್ತು ಮುಹೂರ್ತ :
ಕೋರ್ಟ್ ಮುಖಾಂತರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕೋರ್ಟ್ ಕಮಿಷನರ್ ಮುಖಾಂತರ ಜಪ್ತಿ ಮಾಡಲಿದ್ದೇವೆ ನೀವಾಗಿ ಕೋಣೆಯನ್ನು ಖಾಲಿ ಮಾಡಿ ಹೋಗಿ ಇಲ್ಲವಾದರೆ ನಾವೇ ಎಲ್ಲವನ್ನೂ ಜಪ್ತಿ ಮಾಡುವ ಬಗ್ಗೆ ತಿಳಿಸಲಾಗಿತ್ತು .ಆದರೆ
ಈ ಬಗ್ಗೆ ಕಟ್ಟಡದ ಮಾಲೀಕರು, ವಕೀಲರಾದ ಪ್ರಸಾದ್ ಕೆ.ಎಸ್ ಅವರ ಮೂಲಕ ಸಾಲ ವಸೂಲಾತಿ ಪ್ರಾಧಿಕಾರ (D R T) ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು ಒಂದು ತಿಂಗಳವರೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ಅಂಗಡಿ ಹೊಂದಿರುವ ಬಾಡಿಗೆದಾರರು ಸ್ವಲ್ಪ ದಿನ ನಿಟ್ಟುಸಿರು ಬಿಡುವಂತಾಗಿದೆ. ಅದಲ್ಲದೇ ಈ ಬಗ್ಗೆ ಕಟ್ಟಡದ ಎಲ್ಲಾ ಬಾಡಿಗೆದಾರರು ಸಭೆ ಸೇರಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ಮಾಡಲು ತೀರ್ಮಾನಿಸಿದ್ದಾರೆ.