ಬೆಳ್ತಂಗಡಿ: ಮುಖ್ಯಮಂತ್ರಿ ಬದಲಾದರೂ ರಾಜ್ಯದ ಆಡಳಿತ ವ್ಯವಸ್ಥೆ ಬದಲಾಗಿಲ್ಲ. ಅಧಿಕಾರಿಗಳು ಸರಕಾರದ ಹತೋಟಿಗೆ ಸಿಕ್ಕಿಲ್ಲ. ರಾಜ್ಯ ಸರಕಾರ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದರು.
ಬೆಳ್ತಂಗಡಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ರಾಜ್ಯವನ್ನು ಮುಜುಗರಕ್ಕೀಡುಮಾಡಿದೆ. ಪಾರಂಪರಿಕ ನಗರಿಯಲ್ಲಿ ಈ ಹಿಂದಿನಿಂದಲೂ ಅಧಿಕಾರಿಗಳು, ರಾಜಕರಣಿಗಳ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಮೈಸೂರಿನ ಘಟನೆಯ ಕುರಿತು ಗೃಹಸಚಿವರು ಹಾಗೂ ಇತರ ಬಿಜೆಪಿ ಸಚಿವರುಗಳು ಯುವತಿ ಆ ರಾತ್ರಿ ಅಲ್ಲಿ ಹೋಗುವ ಅವಶ್ಯಕತೆ ಏನಿತ್ತು ಎಂಬ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ. ಇಂತಹಾ ಸರಕಾರ ಇಲ್ಲಿಯವರೆಗೆ ಬಂದಿಲ್ಲ ರಾಜ್ಯದ ಜನರಿಗೆ ರಕ್ಷಣೆ ನೀಡಲು ಶಕ್ತಿಯಿಲ್ಲದ ಗೃಹಸಚಿವರು ರಾಜೀನಾಮೆ ನೀಡಲಿ ಎಂದು ಅವರು ಒತ್ತಾಯಿಸಿದರು.
ದೇಶದ ಆರ್ಥಿಕತೆ ಪಾತಾಳಕ್ಕೆ ಇಳಿದಿದೆ. ಗ್ಯಾಸ್, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಜನ ಬೇಸತ್ತಿದ್ದಾರೆ. ಪ್ರಸಕ್ತ ಪ್ರತಿಯೊಂದು ಅಗತ್ಯ ವಸ್ತುಗಳಿಗೂ ಹಿಂದಿಗಿಂತ ಮೂರು ಪಟ್ಟು ಏರಿಕೆಯಾಗಿದೆ. ದೇಶದ ನಾಗರಿಕರಿಗೆ ಕೋವಿಡ್ ಲಸಿಕೆ ನೀಡುವಲ್ಲಿಯೂ ವಿಫಲವಾಗಿದೆ. ಮೂರನೇ ಅಲೆ ಸಂಭವಿಸುವ ಸಾಧ್ಯತೆ ಕುರಿತು ತಜ್ಞರು ಸೂಚನೆ ನೀಡಿದ್ದಾರೆ. ಹೀಗಿದ್ದಾಗಲು ಶಿಕ್ಷಕರು ಮತ್ತು ಮಕ್ಕಳಿಗೆ ಲಸಿಕೆ ನೀಡುವಲ್ಲಿ ಕ್ರಮ ವಹಿಸದೆ ಹೊಸ ಶಿಕ್ಷಣ ನೀತಿ ತರುವಲ್ಲಿ ಆಸಕ್ತಿ ವಹಿಸುತ್ತಿದೆ ಎಂದರು.
ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವ ಬಿಜೆಪಿಗರು ಇಂದು ನೆಹರೂ ಅವರಿಂದ ಮನಮೋಹನ್ ಸಿಂಗ್ ವರೆಗಿನ ಸರಕಾರಗಳು ದಕ್ಷತೆಯಿಂದ ದೇಶಕ್ಕಾಗಿ ಮಾಡಿಟ್ಟ ಆಸ್ತಿಯೆಲ್ಲವನ್ನು ಮಾರಾಟ ಮಾಡುತ್ತಿದ್ದಾರೆ. ಇವರಿಗೆ ಮಾರಟ ಮಾಡಲು ಆಸ್ತಿಗಳು ಎಲ್ಲಿಂದ ಬಂದವು ಎಂದು ಆಲೋಚನೆ ಮಾಡಲಿ ಬಿಜೆಪಿ ಸರಕಾರದಲ್ಲಿ ಹೀಗಾಗಿ ಅಚ್ಚೇದಿನ್ ಅದಾನಿ, ಅಂಬಾನಿಗೆ ಬಂದಿದೆ. ಈ ನಡುವೆಯೂ ಜನರ ಹಾದಿ ತಪ್ಪಿಸುವಲ್ಲಿ ಬೆಜೆಪಿಗರು ನಿಸ್ಸೀಮರು. ಕೇಂದ್ರ ಸಚಿವೆ ಶೋಭಾಕರಂದ್ಲಾಜೆಯವರು ರೈತರನ್ನು ದಲ್ಲಾಳಿಗಳು ಎಂದು ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ದಲ್ಲಾಳಿಗರು ಯಾರು, ದರೋಡೆಕೋರು ಯಾರೆಂದು ಅರಿವಾಗಿದೆ. ಬಿಜೆಪಿ ಸರಕಾರದ ಎಲ್ಲರ ಮೇಲು ಇ.ಡಿ. ತನಿಖೆಯಾಗಬೇಕು ಎಂದರು.
ಸರಕಾರಕ್ಕೆ ಎಲ್ಲರೂ ತೆರಿಗೆ ದುಡ್ಡು ಕಟ್ಟುತ್ತಿದ್ದಾರೆ. ಆದರೆ ಬಿಜೆಪಿ ಶಾಸಕರಿಗಷ್ಟೆ ಅನುದಾನ ಲಭ್ಯವಾಗುತ್ತಿದೆ. ವಿರೋಧ ಪಕ್ಷದ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಇದು ಬಿಜೆಪಿ ದುಡ್ಡಲ್ಲ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಇಲ್ಲ. ಬದಲಾಗಿ ಎಲ್ಲವೂ ಬಿಜೆಪಿಗಿಂದು ನೀತಿ, ಬಿಜೆಪಿಗೆ ವಿಶ್ವಾಸ ಎಂಬಂತಾಗಿದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಅಷ್ಟಮಿ, ಚೌತಿ ಬರುತ್ತಿದೆ. ಮನೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆಗೆ ರಾಜ್ಯ ಸರಕಾರ ಅವಕಾಶ ಕಲ್ಪಿಸಿಕೊಡಬೇಕಿದೆ. ಬಿಜೆಪಿ ಸಚಿವರುಗಳು ರಾಜ್ಯದಲ್ಲಿ ಜಾಧಾ ಮಾಡಬಹುದಾದರೆ ಜನರು ಯಾಕೆ ಹಬ್ಬಗಳನ್ನು ಆಚರಿಸಬಾರದು.ಸಚಿವರುಗಳಿಗೆ ಒಂದು ಕಾನೂನು ಜತೆಗೆ ಒಂದು ಕಾನೂನು ಸರಿಯಲ್ಲ ಎಂದು ಹರೀಶ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಅಧ್ಯಕ್ಷ ಶೈಲೇಶ್ ಕುಮಾರ್, ಜಗದೀಶ್ ಅಬ್ದುಲದ ರಹಿಮಾನ್ ಉಪಸ್ಥಿತರಿದ್ದರು.