ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡಿದೆ.
ಅಡುಗೆ ಖಾದ್ಯ ತೈಲ ಬೆಲೆ ಏರಿಕೆ ಆದ ಹಿನ್ನೆಲೆಯಲ್ಲಿ ಪಾಮ್ ಆಯಿಲ್, ಸೋಯಾ ಆಯಿಲ್ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ಕಸ್ಟಮ್ ಸುಂಕವನ್ನು ಸರ್ಕಾರವು ಕಡಿತಗೊಳಿಸಿದ್ದು, ಖಾದ್ಯ ತೈಲ ಬೆಲೆಗಳ ಬೆಲೆ ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಖಾದ್ಯ ತೈಲದ ಮೇಲೆ ಕಸ್ಟಮ್ ಸುಂಕ ಕಡಿತ ಸಂಬಂಧ ಹೊರಡಿಸಿರುವ ನೋಟಿಫಿಕೇಷನ್ ಇಂದಿನಿಂದಲೇ ಜಾರಿಯಾಗಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಕಚ್ಚಾ ತಾಳೆ ಎಣ್ಣೆಯ ಮೇಲಿನ ಮೂಲ ಆಮದು ತೆರಿಗೆಯನ್ನು ಶೇಕಡಾ 10 ರಿಂದ 2.5 ಕ್ಕೆ ಇಳಿಸಲಾಗಿದೆ. ಕಚ್ಚಾ ಸೋಯಾ ಎಣ್ಣೆ ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆಯನ್ನು ಶೇ 7.5 ರಿಂದ 2.5 ಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಸ್ಟಮ್ ಸುಂಕ ಇಳಿಕೆಯೊಂದಿ ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಯಿಲ್, ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆ ಶೇ. 24.75ರಷ್ಟು ಇಳಿಕೆಯಾಗಲಿದೆ. ಆದರೆ ಸಂಸ್ಕರಿಸಿದ ತಾಳೆ ಎಣ್ಣೆ, ಸೋಯಾಯಿಲ್ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆ ಶೇ.35.75ರಷ್ಟಾಗಲಿದೆ. ಚಿಲ್ಲರೆ ಬೆಲೆಯಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆಯಲ್ಲಿ 4 – 5 ರೂಪಾಯಿಗಳಷ್ಟು ಕಡಿಮೆಯಾಗಬಹುದು.