ಮಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆಗೆ ಅವಕಾಶ ಸಿಗದ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಅತ್ಮಹತ್ಯೆಗೆ ಪ್ರಯತ್ನ ನಡೆಸಿರುವ ಘಟನೆ ನಡೆದಿದೆ. ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2020-21 ನೇ ಸಾಲಿನಲ್ಲಿ 10 ನೇ ತರಗತಿ ಅಭ್ಯಾಸ ಮಾಡುತ್ತಿದ್ದ ಗ್ರೀಷ್ಮಾ ನಾಯಕ್ ಆತ್ಮಹತ್ಯೆಗೆ ಯತ್ನ ನಡೆಸಿದ ವಿದ್ಯಾರ್ಥಿನಿ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನವಳಾಗಿರುವ ಗ್ರೀಷ್ಮಾ ಫೀಸ್ ಕಟ್ಟಿಲ್ಲ ಅಂತಾ ಪರೀಕ್ಷೆಗೆ ಅವಕಾಶ ಸಿಗದ ಕಾರಣ ಕೊರಟಗೆರೆ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕಳೆದ ವರ್ಷದ ಶಾಲಾ ಶುಲ್ಕ ಮತ್ತು ವಸತಿ ಮತ್ತು ಮೆಸ್ ಬಿಲ್ ಬಾಕಿಯಿರುವುದಕ್ಕೆ ಶಾಲೆಗೆ ಸೇರಿಸದ ಸಂಸ್ಥೆ ಎಸ್ಎಸ್ಎಲ್ ಸಿ ಪರೀಕ್ಷೆಗೆ ನೋಂದಾಯಿಸಿಲ್ಲ ಎನ್ನಲಾಗಿದೆ.
9ನೇ ತರಗತಿಯಲ್ಲಿ 96% ಅಂಕ ಗಳಿಸಿದ್ದ ವಿದ್ಯಾರ್ಥಿನಿ ಗ್ರೀಷ್ಮಾ,10 ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸಿ ಅಂತಾ ಕೇಳಿಕೊಂಡಿದ್ದಳು ಎಂದು ಹೇಳಲಾಗಿದೆ. ಇನ್ನು ವಿದ್ಯಾರ್ಥಿನಿ ನಿವಾಸಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ದು, ಆಗಸ್ಟ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.