Sunday, June 7, 2026
Homeಕರಾವಳಿಸಮಾನತೆಯ ಪಾರಾಯಣ-ಶ್ರೀ ಗುರು ನಾರಾಯಣ: ಒಂದೇ ಜಾತಿ ಒಂದೇ ಮತ ಒಂದೇ ದೇವರು

ಸಮಾನತೆಯ ಪಾರಾಯಣ-ಶ್ರೀ ಗುರು ನಾರಾಯಣ: ಒಂದೇ ಜಾತಿ ಒಂದೇ ಮತ ಒಂದೇ ದೇವರು

- Advertisement -
- Advertisement -

ಚತುರ್ವರ್ಣ ವ್ಯವಸ್ಥೆಯು ಭಾರತದ ಸಾಮಾಜಿಕ ಮತ್ತು ಅರ್ಥ ವ್ಯವಸ್ಥೆಗೆ ಬಾಧಕವೆಂದು ಕಂಡಾಗ ಇವುಗಳ ನಿರ್ಮೂಲನೆಗಾಗಿ ಮತ್ತು ಏಕತೆಗಾಗಿ ದೇಶಾದ್ಯಂತ ಒಂದು ಚಳವಳಿಯು ಉಂಟಾಯಿತು. ಮಾನವನಲ್ಲಿರುವಂತಹ ಜ್ಞಾನವೇ ಆತನ ಶಕ್ತಿಯಾಗಬೇಕು ಹೊರತು ಆತನ ಜಾತಿಯಲ್ಲ ಎಂಬ ಅರಿವನ್ನು ಭಾರತದಾದ್ಯಂತ ಪಸರಿಸಿದ ಮಹಾನ್ ಶಕ್ತಿ ಶ್ರೀ ನಾರಾಯಣ ಗುರುಗಳು. ಅಂತಹ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳ ಜಯಂತಿಯ ಶುಭಾಶಯಗಳು.

1855 ಆಗಸ್ಟ್ 28ರಂದು ಆಗಿನ ತಿರುವಾಂಕೂರು ಈಗಿನ ತಿರುವನಂತಪುರದ ಚೆಂಪಳಾಂತಿಯಲ್ಲಿ ‘ಈಳವ’ ಕುಟುಂಬದಲ್ಲಿ ಮದನ್ ಆಸನ್ ಮತ್ತು ಕುಟ್ಟಿಯಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಪೂರ್ವ ಶಿಕ್ಷಣವನ್ನು ಚೆಂಪಳಾಂತಿ ಮೂತಪಿಳ್ಳೈ ಅವರಲ್ಲಿ ಪಡೆದರು, ಈ ಸಮಯದಲ್ಲಿ ತಾಯಿಯನ್ನು ಅಗಲಿದರು. ತನ್ನ 21ನೇ ವಯಸ್ಸಿನಲ್ಲಿ ತಿರುವಾಂಕೂರಿನ ರಾಜಧಾನಿಗೆ ಆಗಮಿಸಿದ ನಾರಾಯಣರು ರಾಮನ್ ಪಿಳ್ಳೆ ಆಸನ್ ಇವರಿಂದ ಸಂಸ್ಕೃತ ಅಧ್ಯಯನವನ್ನು ಆರಂಭಿಸಿದರು, ಉಪನಿಷತ್ತು, ಸಾಹಿತ್ಯ, ತರ್ಕಶಾಸ್ತ್ರ ವಾಕ್ಚಾತುರ್ಯ ಪಾರಂಗತನಾಗಿ ತನ್ನ ಹಳ್ಳಿಗೆ ಹಿಂತಿರುಗಿದ ಇವರು ಹಳ್ಳಿಯಲ್ಲಿ ಸ್ಥಳೀಯ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಲು ಆರಂಭಿಸಿದರು. ವೈವಾಹಿಕ ಜೀವನವನ್ನು ಆರಂಭಿಸಿದ ಇವರು ಸಾಂಸಾರಿಕ ಜೀವನದಿಂದ ವಿಮುಖರಾಗಿ ಸಾಮಾಜಿಕ ಜೀವನ ಮತ್ತು ಸಮಾಜದ ಪುನರ್ರಚನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು.

ಶ್ರೀ ನಾರಾಯಣ ಗುರು ಮತ್ತು ಧಾರ್ಮಿಕ ಕ್ರಾಂತಿ:

ಮನೆಯನ್ನು ತ್ಯಜಿಸಿ ಸಂಚಾರಿಯಾದ ಗುರುಗಳು ಕೇರಳ ಮತ್ತು ತಮಿಳುನಾಡಿನಾದ್ಯಂತ ಸಂಚರಿಸಿದರು. ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯನ್ನು ಮಾಡಿದ ಚಟ್ಟಂಬಿ ಸ್ವಾಮಿಕಳ್ ರನ್ನು ಭೇಟಿ ಮಾಡಿದ ಗುರುಗಳು ಮುಂದೆ ಅಯ್ಯಾವುಸ್ವಾಮಿಕಳ್ ಇವರಿಂದ ಧ್ಯಾನ ಮತ್ತು ಯೋಗವನ್ನು ಕಲಿತರು. ತಿರುವಾಂಕೂರಿನ ಅರಿವುಪ್ಪುರಂನಲ್ಲಿ ನದಿನೀರಿನಿಂದ ತೆಗೆದ ಶಿಲೆಯನ್ನೇ ಶಿವನೆಂದು ಪೂಜಿಸಿದರೆ, ಮುಂದೆ ಇದು ‘ಅರಿವುಪ್ಪುರಂ ಪ್ರತಿಷ್ಟೆ’ ಎಂದು ಜನಜನಿತಗೊಂಡಿತು. ಇದನ್ನು ಪ್ರಶ್ನಿಸಿದ ಮೇಲ್ವರ್ಗದ ಜನರಿಗೆ ‘ಇವನು ಬ್ರಾಹ್ಮಣ ಶಿವನಲ್ಲ, ಇವನು ಈಳವ ಶಿವ’ ನೆಂದು ಸೆಡ್ಡುಹೊಡೆದರು, ಮುಂದೆ ಇದು ಜಾತೀಯವನ್ನು ವಿರೋಧಿಸುವ ಮಹಾ ಘೋಷಣೆಯಾಯಿತು. ಆ ಸ್ಥಳದಲ್ಲಿ ಮುಂದೆ ದೇವಾಲಯ ನಿರ್ಮಾಣವಾಯಿತು, ಈಗಲೂ ಇದು ಪ್ರಸಿದ್ಧ ಪ್ರವಾಸಿತಾಣವಾಗಿದೆ. ಮುಂದೆ ಪದ್ಮನಾಭನ್ ಪಲ್ಪು ಇವರಿಂದ ಮೇ 15 1903 ರಲ್ಲಿ ‘ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ’ (SNDP Yogam) ಪ್ರಾರಂಭಗೊಂಡಿತು ಶ್ರೀ ನಾರಾಯಣ ಗುರುಗಳು ಇದರ ಸಂಸ್ಥಾಪಕ ಅಧ್ಯಕ್ಷರಾದರು.

ಧಾರ್ಮಿಕ ಸಾಧನೆ ಮತ್ತು ಸಾಹಿತ್ಯದ ಪ್ರೌಢಿಮೆ:

1904 ರಲ್ಲಿ ‘ಶಿವಗಿರಿ’ಯಲ್ಲಿ ಕೆಳ ವರ್ಗದ ಮಕ್ಕಳ ಉಚಿತ ಶಿಕ್ಷಣವನ್ನು ಆರಂಭಿಸಿದರು ಯಾವುದೇ ಜಾತಿ ಭೇದವಿಲ್ಲದೆ ಶೋಷಣೆಗೆ ಒಳಗಾದ, ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಸಂತೈಸಿದರು. 1912ರಲ್ಲಿ ಶ್ರೀ ಶಾರದಾ ಮಠವನ್ನು ನಿರ್ಮಿಸಿದರು ಮತ್ತು ತ್ರಿಶೂರು,ಕಣ್ಣೂರು,ಅಂಚುತೆಂಗು, ತಲಶ್ಶೇರಿ, ಕೋಯಿಕೋಡ್, ಮಂಗಳೂರಿನಲ್ಲೂ ದೇವಾಲಯಗಳನ್ನು ಪ್ರತಿಷ್ಠಾಪಿಸಿದರು. ಪಕ್ಕದ ಸಿಲೋನ್(ಶ್ರೀ ಲಂಕಾ) ದೇಶದಲ್ಲಿ ಸಂಚರಿಸಿ ಅಲ್ಲಿಯೂ ಕೂಡ ಮಂದಿರವನ್ನು ನಿರ್ಮಿಸಿದ್ದಾರೆ.

ಗುರುಗಳು 45ಕ್ಕೂ ಅಧಿಕ ಧಾರ್ಮಿಕ ಸಾಹಿತ್ಯಗಳನ್ನು ಹೊರತಂದಿದ್ದಾರೆ. ಹೆಚ್ಚು ಮಲಯಾಳಿ ಭಾಷೆಯ ಸಾಹಿತ್ಯವನ್ನು ಹೊರತಂದರೆ ಸಂಸ್ಕೃತ ಮತ್ತು ತಮಿಳು ಭಾಷೆಯಲ್ಲಿಯೂ ಸಾಹಿತ್ಯಗಳನ್ನು ರಚಿಸಿದ್ದಾರೆ. ‘ಆತ್ಮೋಪದೇಶ ಶತಕಂ’ ಸ್ತೋತ್ರ ಮತ್ತು ‘ದೈವ ದಶಕಂ’ ಎಂಬ ದೇವರ ಸ್ತೋತ್ರಗಳನ್ನು ರಚಿಸಿದ್ದಾರೆ. ತಿರುವಳ್ಳುವರ್ ರಚಿಸಿರುವ ‘ತಿರುಕುರಳ್’ ‘ಈಶಾವಾಸ್ಯ ಉಪನಿಷತ್’ ಮತ್ತು ‘ಒಳಿವಿಲ್ ಒಡುಕಮ್’ ಭಾಷಾಂತರ ಗೊಳಿಸಿದ್ದಾರೆ.

ಒಂದೇ ಜಾತಿ ಒಂದೇ ಮತ ಒಂದೇ ದೇವರು:

ವರ್ಣ ತಾರತಮ್ಯದ ಬಲಿಷ್ಠ ಬಾಹುಗಳು ಅಪ್ಪಿಕೊಂಡ ಕಾಲದಲ್ಲಿ ವಿವಿಧ ಸ್ತರಗಳಲ್ಲಿ ಹೋಳಾಗುತ್ತಿದ್ದ ಕಾಲಘಟ್ಟದಲ್ಲಿ, ಅಸ್ಪೃಶ್ಯತೆ, ಸ್ತ್ರೀ ಶೋಷಣೆ, ಜಾತಿ ಭೇದ, ಲಿಂಗ ಭೇದ ಎಂಬ ಸಾಮಾಜಿಕ ಪಿಡುಗುಗಳು ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಜನರಲ್ಲಿ ಐಕ್ಯಮತವನ್ನು ಮೂಡಿಸಿ ಎಲ್ಲ ವರ್ಣದವರನ್ನು ಒಂದೆಡೆ ಸೇರುವಂತೆ ಪ್ರೇರಣೆಯಾದರು. ಹಿಂದೂ ಧರ್ಮದ ಪುನರುಜ್ಜೀವನವನ್ನು ಎಲ್ಲ ಜಾತಿಯ ಜನರು ಒಂದೆಡೆ ಸೇರಿ ದೇವರನ್ನು ಪೂಜಿಸುವುದು, ಸಾಮಾಜಿಕ ಸಮಾನತೆ ಮತ್ತು ಜಾಗತಿಕವಾಗಿ ಸಹೋದರತ್ವವನ್ನು ಬೆಳೆಸಲು ಶ್ರೀ ಗುರುಗಳು ಪ್ರೇರಣೆಯಾದರು. ಅದ್ವೈತಾಚಾರ್ಯ ಆದಿಶಂಕರರ ದೇವರೊಬ್ಬನೇ ನಾಮ ಹಲವು ಎಂಬ ತತ್ವಗಳನ್ನು ಒಂದೇ ಜಾತಿ ಒಂದೇ ಮತ ಒಂದೇ ದೇವರು(ಒರು ಜಾತಿ ಒರು ಮತಂ ಒರು ದೈವಂ, ಮನುಷ್ಯನು) ಎಂಬ ಘೋಷವಾಕ್ಯದೊಂದಿಗೆ ಸಂತನೆನೆಸಿಕೊಂಡರು.

ಈ ಕ್ರಾಂತಿಯು ಕ್ಷಿಪ್ರವಾಗಿ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಹಾಯಕವಾಯಿತು. ಜನರ ಮಧ್ಯೆ ಒಮ್ಮತವನ್ನು ತರಲು ಗುರುಗಳು ನಡೆಸಿದ ಹೋರಾಟವು ಫಲವನ್ನು ನೀಡಿತು. ಇವರ ಈ ಹೋರಾಟದಲ್ಲಿ ಪಾಲ್ಗೊಂಡ ಹಲವರು ಅನುಯಾಯಿಗಳಾದರು. ಇಪ್ಪತ್ತರ ಶತಮಾನದಲ್ಲಿ ಭಾರತದಾದ್ಯಂತ ಸಾಮಾಜಿಕ ಬದಲಾವಣೆಗೆ ಹೆಚ್ಚು ಒತ್ತು ನೀಡಿ ಎಲ್ಲಾ ಜನರು ಒಗ್ಗೂಡುವಂತೆ ಮಾಡಿತು. ನಾರಾಯಣ ಗುರುಗಳ ಸಿದ್ಧಾಂತಕ್ಕೆ ಮಾರುಹೋಗಿ, ಸ್ವತ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದ ಮಹಾತ್ಮ ಗಾಂಧೀಜಿಯವರು ಕೂಡಾ ಮಾರ್ಗದರ್ಶನವನ್ನು ಪಡೆದಿದ್ದರು.

ಶ್ರೀ ಗುರುಗಳು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯವನ್ನು ಪ್ರತಿಷ್ಠಾಪಿಸಿದ್ದಾರೆ ಎಂಬುದು ನಮ್ಮೆಲ್ಲರ ಹೆಮ್ಮೆ, ಬೆಟ್ಟ ಮಧ್ಯದಲ್ಲಿ ಉದಯಿಸಿ ಗಾಢಾಂಧಕಾರವನ್ನು ಹೋಗಿಸಿ, ಸ್ಫುಟವಾಗಿ ಪ್ರಜ್ವಲಿಸಿ ಕಡಲೆಡೆಗೆ ಸಾಗುವ ಸೂರ್ಯನಂತೆ ಶ್ರೀ ನಾರಾಯಣ ಗುರುಗಳು 1928 ಸೆಪ್ಟೆಂಬರ್ 20ರಂದು ತನ್ನ 73ನೇ ವಯಸ್ಸಿನಲ್ಲಿ ರಲ್ಲಿ ಶಿವಕ್ಯರಾದರು.

ಬರಹ :ನಿತಿನ್ ಕುಮಾರ್ ಚಾರ್ಮಾಡಿ

- Advertisement -

Latest News

error: Content is protected !!