ಮಂಗಳೂರು: ಕರಾವಳಿ ನವಿಲು ಸಂತತಿ ಅಧಿಕವಾಗುತ್ತಿದ್ದು, ಬಹುತೇಕ ಮನೆಗಳಿಗೆ ಇವು ಖಾಯಂ ಅತಿಥಿಗಳಂತಾಗಿವೆ. ನವಿಲುಗಳು ಕಾಣ ಸಿಕ್ಕರೂ ಅವುಗಲು ಗರಿ ಬಿಚ್ಚಿ ನರ್ತಿಸುವುದನ್ನು ನೋಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಆದರೆ ಮಂಗಳೂರಿನ ದೇವಾಲಯವೊಂದಕ್ಕೆ ನೀವು ಭೇಟಿ ಕೊಟ್ರೆ ಈ ಅಪರೂಪದ ಕ್ಷಣವನ್ನು ಯಾವಾಗ ಬೇಕಾದರೂ ಕಣ್ತುಂಬಿಕೊಳ್ಳಬಹುದು.
ಮಂಗಳೂರಿನ ಹೊರವಲಯದ ನೀರು ಮಾರ್ಗದ ಮಾಣೂರು ಶ್ರೀ ಅನಂತ ಪದ್ಮನಾಭ ಸುಬ್ರಮಣ್ಯ ದೇಗುಲದಲ್ಲಿರುವ ನವಿಲು ಅರ್ಚಕರು ಹೇಳಿದಂತೆ ನರ್ತಿಸುತ್ತೆ. ಇತ್ತೀಚೆಗೆ ಈ ನವಿಲು ನಾಟ್ಯವಾಡುವ ವಿಡಿಯೋ ಸಖತ್ ವೈರಲ್ ಆಗಿತ್ತು.ದೇವಸ್ಥಾನದ ಪಕ್ಕದಲ್ಲೇ ಅರ್ಚಕ ರಾಜೇಶ್ ಭಟ್ ಅವರ ಮನೆಯಿದ್ದು ಅಲ್ಲಿಗೆ ಬರುವ ನವಿಲು ಮನೆಯ ತುಳುವಿನಲ್ಲಿ ಮಾತನಾಡಿದರೆ ಅದಕ್ಕೆ ಸ್ಪಂದಿಸುತ್ತೆ.
ಅಂದ್ಹಾಗೆ ಕಳೆದ 7-8 ವರ್ಷಗಳಿಂದ ಈ ನವಿಲು ಅಲ್ಲೇ ವಾಸವಾಗಿದೆ. 7-8 ವರ್ಷಗಳ ಹಿಂದೆ ಸ್ಥಳೀಯ ನಿವಾಸಿಯೊಬ್ಬರು ತಮಗೆ ದೊರೆತ ನವಿಲಿನ ಮೊಟ್ಟೆಯನ್ನು ಕೋಳಿ ಮೊಟ್ಟೆ ಜೊತೆ ಕಾವಿಗೆ ಇರಿಸಿದ್ದರು. ಮೊಟ್ಟೆ ಒಡೆದು ಮರಿಗಳು ಹೊರ ಬರುತ್ತಿದ್ದಂತೆ ಅವರು ಈ ಮರಿಗಳನ್ನು ದೇಗುಲಕ್ಕೆ ಒಪ್ಪಿಸಿದ್ದರು. ಅದರಲ್ಲಿ ಎರಡು ಮರಿಗಳು ಕಾಡು ಸೇರಿದ್ರೆ ಒಂದು ಮರಿ ದೇವಸ್ಥಾನದ ಆವರಣದಲ್ಲೇ ಬೆಳೆದಿದ್ದು, ಇಂದಿಗೂ ಅಲ್ಲೇ ಇದೆ. ದೇವಾಲಯ ಅರ್ಚಕ ಈ ನವಿಲಿಗೆ ಮಯೂರ ಎಂದು ಹೆಸರಿಟ್ಟಿದ್ದು ನವಿಲು ಅರ್ಚಕರ ಮಾತನ್ನು ಚಾಚು ತಪ್ಪದೇ ಪಾಲಿಸುತ್ತೆ.
ಇನ್ನು ರಾತ್ರಿ ಪೂಜೆ ವೇಳೆ ನಮಸ್ಕಾರ ಮಂಟಪಕ್ಕೆ ತಪ್ಪದೇ ಬರುವ ಮಯೂರ ಸುತ್ತಮುತ್ತಲಿನ ಜನರಿಗೂ ಫೇವರೇಟ್. ಯಾರಾದ್ರೂ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ರೆ ಸಾಕು ಎಷ್ಟು ಹೊತ್ತಾದರೂ ಸರಿ ಪೋಸ್ ಕೊಡುತ್ತೆ. ನೃತ್ಯ ಮಾಡುತ್ತೆ. ಇದೀಗ ನವಿಲು ಸಾಮಾಜಿಕ ಜಾಲತಾಣದಿಂದಾಗಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ನವಿಲನ್ನು ನೋಡೋದಕ್ಕೆ ಅಂತಾನೇ ಸಾಕಷ್ಟು ಸಂಖ್ಯೆಯಲ್ಲಿ ಜನ ದೇಗುಲಕ್ಕೆ ಆಗಮಿಸುತ್ತಿದ್ದಾರೆ.