ಉಪ್ಪಿನಂಗಡಿ: ಮಗನ ಸಾವಿನ ನೋವಿನಲ್ಲಿದ್ದ ಹೆತ್ತವರನ್ನು ಆತ ಮಾಡಿದ ಒಂದು ಒಳ್ಳೆ ಕೆಲಸ ಕೈ ಹಿಡಿದಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ? 2021ರ ನವೆಂಬರ್ 14ರಂದು ಬಂಟ್ವಾಳ ತಾಲ್ಲೂಕು ತುಂಬೆಯ ರಾಮಲ್ಕಟ್ಟೆ ಎಂಬಲ್ಲಿ ಸಂಭವಿಸಿದ ಪಿಕ್ಅಪ್ ಅಪಘಾತದಲ್ಲಿ ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ ಆಶಿಕ್ ಹಾಗೂ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ನಿವಾಸಿ ಚೇತನ್ ಮೃತಪಟ್ಟಿದ್ದರು.
ಇಬ್ಬರೂ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಆಶಿಕ್ ಅವರಿಗೆ ಕೆಬಿಎಲ್ ಸುರಕ್ಷಾ ಅಪಘಾತ ವಿಮಾ ಸೌಲಭ್ಯ ಇತ್ತು. ವಾರ್ಷಿಕ 150 ರೂಪಾಯಿ ಪಾವತಿಸುತ್ತಿದ್ದರು. ಚೇತನ್ ಈ ಸೌಲಭ್ಯ ನಿರಾಕರಿಸಿದ್ದರು.
ಅದರಂತೆ ಅಪಘಾತದ ಬಳಿಕ 10 ಲಕ್ಷ ರೂಪಾಯಿ ಆಶಿಕ್ ಕುಟುಂಬಕ್ಕೆ ಲಭಿಸಿದೆ. ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಶಾಖಾಧಿಕಾರಿ ಮುರಳಿ ಆರ್. ಶ್ಯಾಮ್ ಭಟ್ ಅವರು ಆಶಿಕ್ ತಾಯಿ ಮಮತಾ ಅವರಿಗೆ ವಿಮೆ ಮೊತ್ತದ ಚೆಕ್ ಹಸ್ತಾಂತರಿಸಿದರು. ಸಹಾಯಕ ವ್ಯವಸ್ಥಾಪಕ ಫ್ಲೇವಿಟ್ ಶೈನಿ ಫರ್ನಾಂಡಿಸ್, ವಿಮಾ ಸಂಸ್ಥೆಯ ಪ್ರಸನ್ನ ದೇವಾಡಿಗ ಇದ್ದರು. ಒಟ್ಟಿನಲ್ಲಿ ಆಶಿಕ್ ಕೈಗೊಂಡ ಆ ಒಂದು ನಿರ್ಧಾರ ಇವತ್ತು ಮಗನ ಅಗಲಿಕೆಯ ನೋವಿನಲ್ಲೂ ಕುಟುಂಬಕ್ಕೆ ಆಸರೆಯಾಗಿದೆ.