ಚಿಕ್ಕಮಗಳೂರು: ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ತಂದೆಯ ಮೇಲೆ ಪುತ್ರ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಚನ್ನಡ್ಲಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಚನ್ನಡ್ಲಿ ಗ್ರಾಮದ ಸುಂದರ್ ಪೂಜಾರಿ(50) ಮೃತ ದುರ್ದೈವಿ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತಾಲೂಕಿನ ಚನ್ನಡ್ಲಿಯ ಸುಂದರ್ ಅವರ ಪುತ್ರ ಹಣ ನೀಡುವಂತೆ ತಂದೆ-ತಾಯಿಗೆ ಪೀಡಿಸುತ್ತಿದ್ದ. ಹಣ ಕೊಡದ ಹಿನ್ನೆಲೆಯಲ್ಲಿ ಕೊಡಲಿಯಿಂದ ಹಲ್ಲೆ ಮಾಡಿದ್ದ. ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸುಂದರ್ ಪಾರ್ಶ್ವವಾಯು ಪೀಡಿತರಾಗಿ ಕಳೆದ ವರ್ಷದಿಂದ ಹಾಸಿಗೆ ಹಿಡಿದಿದ್ದರು. ವಿಶೇಷ ಚೇತನ ಇಬ್ಬರು ಮಕ್ಕಳು ಮತ್ತು ಪತ್ನಿಯೊಂದಿಗೆ ಅವರು ವಾಸವಾಗಿದ್ದು, ದಾನಿಗಳು ಅವರಿಗೆ ನೆರವು ನೀಡಿದ್ದರಿಂದ ಲಕ್ಷಾಂತರ ರೂ. ಸಂಗ್ರಹವಾಗಿದೆ. ಬೆಂಗಳೂರಿನಲ್ಲಿದ್ದ ಪುತ್ರ ನಿಖೇಶ್ ದಾನಿಗಳು ನೀಡಿದ ಹಣ ಕೊಡುವಂತೆ ಜಗಳವಾಡಿ ತಂದೆಯ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.