ಮಂಗಳೂರು: ಹಳೇ ದ್ವೇಷದ ಹಿನ್ನೆಲೆ ಅಂಗಡಿ ಹಾಗೂ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟ ಘಟನೆ ಮಂಗಳೂರಿನ ಕಾಳಿಕಾಂಬಾ ದೇವಸ್ಥಾನದ ಬಳಿ ನಡೆದಿದೆ.
ವಚನರಾಮ್ ರಾಯ್ಕ್ ಎಂಬವರು ಕಾಳಿಕಾಂಬಾ ದೇವಸ್ಥಾನದ ಬಳಿ ಕಳೆದ 7 ವರ್ಷದಿಂದ ಹಾರ್ಡ್ವೇರ್ ಮತ್ತು ವುಡನ್ ಮೋಲ್ಡಿಂಗ್ ವ್ಯವಹಾರದ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸೋಮವಾರ ಮುಂಜಾನೆ 3:30 ಹೊತ್ತಿಗೆ ಅವರ ಅಂಗಡಿಯ ಮುಂದೆ ನಿಲ್ಲಿಸಿದ್ದ ಟಾಟಾ ಏಸ್ ವಾಹನಕ್ಕೆ ಬೆಂಕಿ ತಗಲಿರುವ ಬಗ್ಗೆ ಗಣೇಶ್ ಶೆಟ್ಟಿ ಎಂಬವರು ಕರೆ ಮಾಡಿ ತಿಳಿಸಿದ್ದಾರೆ.
ವಚನರಾಮ್ ತಕ್ಷಣ ಅಂಗಡಿಗೆ ತೆರಳಿ ನೋಡಿದಾಗ ವಾಹನ ಮತ್ತು ಅಂಗಡಿಯಲ್ಲಿ ಬೆಂಕಿ ಕಾಣಿಸುತ್ತಿತ್ತು. ಸಿಸಿ ಕ್ಯಾಮರಾದ ಫೂಟೇಜ್ ಪರಿಶೀಲಿಸಿದಾಗ ವಾಹನ ಮತ್ತು ಅಂಗಡಿಗೆ ಬಿರಾಸ್ ಎಂಬಾತ ಬೆಂಕಿ ಕೊಡುತ್ತಿರುವುದು ಕಂಡುಬಂದಿದೆ. ಅಂಗಡಿಯ ಕಟ್ಟಡದ 3ನೇ ಮಳಿಗೆಯಲ್ಲಿ ವಾಸವಾಗಿದ್ದ ಬಿರಾಸ್ ಸರಿಯಾಗಿ ಬಾಡಿಗೆ ನೀಡುತ್ತಿರಲಿಲ್ಲ. ಬಾಡಿಗೆ ಕೇಳಿದ್ದ ದ್ವೇಷದಿಂದ ಉದ್ದೇಶಪೂರ್ವಕವಾಗಿ ಭಾನುವಾರ ರಾತ್ರಿ ಅಂಗಡಿ ಹಾಗೂ ವಾಹನಕ್ಕೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಸುಮಾರು 10-15 ಲ.ರೂ. ಮೌಲ್ಯದ ಸೊತ್ತುಗಳಿಗೆ ಮತ್ತು 7 ಲ.ರೂ. ಮೌಲ್ಯದ ವಾಹನಕ್ಕೆ ಹಾನಿಯಾಗಿದೆ ಎಂದು ವಚನರಾಮ್ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.