ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ನಾಗರ ಹಾವು ಕಾಣಿಸಿಕೊಂಡು ಕೆಲ ಹೊತ್ತು ಆತಂಕ ಮೂಡಿಸಿದ ಘಟನೆ ನಡೆದಿದೆ.
ಇಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರ ಬೈಲು ನಿವಾಸಿಗಳಾದ ಪ್ರವೀಣ್ ಹಾಗೂ ಅವರ ಪತ್ನಿ ಮೀನಾ ಮತ್ತು ಮಗ ಕೃತಿಕ್ ಮೂವರು ಬೆಳ್ತಂಗಡಿಯ ಮುಳಿಯ ಜುವೆಲರ್ಸ್ ಮುಂಭಾಗದಲ್ಲಿ ತಮ್ಮ ಕಾರು Zen ಪಾರ್ಕ್ ಮಾಡಿ ಅಮರ್ ಡ್ರಗ್ ಹೌಸ್ ಗೆ ಮೆಡಿಸಿನ್ ಖರೀದಿಸಲು ಹೋಗಿದ್ದರು. ವಾಪಾಸ್ ಬಂದು ಕಾರಿನಲ್ಲಿ ಪ್ರವೀಣ್ ಚಾಲಕನ ಸೀಟಿನಲ್ಲಿ ಕುಳಿತು ಪತ್ನಿ ಮತ್ತು ಮಗ ಹಿಂಭಾಗದ ಸೀಟಿನಲ್ಲಿ ಕೂರಲು ಬಾಗಿಲು ತೆರೆದಾಗ ನಾಗರಹಾವು ಕಾರಿನ ಸೀಟಿನ ಕೆಳಭಾಗದಲ್ಲಿ ಕಂಡಿದೆ. ತಕ್ಷಣ ಭಯಭೀತರಾಗಿ ಎಲ್ಲರೂ ಕಾರಿನಿಂದ ಇಳಿದು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಉಜಿರೆಯ ಸ್ನೇಕ್ ಜೋಯ್ ಸ್ಥಳಕ್ಕೆ ಧಾವಿಸಿ ಕಾರನ್ನು ಪರಿಶೀಲನೆ ಮಾಡಿದಾಗ ಸೀಟಿನ ಕೇಳಭಾಗದ ಮ್ಯಾಟ್ ನ ಒಳಗೆ ನುಸುಳಿ ಕುಳಿತಿತ್ತು . ಮ್ಯಾಟ್ ಎಲ್ಲಾ ಕತ್ತರಿಸಿ ತೆಗೆದರೂ ಪ್ರಯೋಜನವಾಗಿಲ್ಲ. ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ನಾಗರಹಾವಿನ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ . ಕೊನೆಗೆ ಬೆಳ್ತಂಗಡಿ ಮೂರು ಮಾರ್ಗದ ಸರ್ವಿಸ್ ಸ್ಟೇಷನ್ ಗೆ ಕಾರನ್ನು ಸ್ನೇಕ್ ಜೋಯ್ ಚಾಲನೆ ಮಾಡಿ ಅಲ್ಲಿ ಕಾರಿನ ಸುತ್ತಮುತ್ತ ನೀರು ಹಾಯಿಸಿದರೂ ಹಾವು ಪತ್ತೆಯಾಗಿಲ್ಲ ಕೊನೆಗೆ ಚಾಲಕನ ಸ್ಟೇರಿಂಗ್ ಭಾಗದ ಒಳಗೆ ನೀರು ಹಾಯಿಸಿದಾಗ ಒಂದುವರೆ ಘಂಟೆ ಬಳಿಕ ಅಡಗಿದ್ದ ನಾಗರ ಹಾವು ಹೊರಬಂದಿದೆ. ತಕ್ಷಣ ಸ್ನೇಕ್ ಜೋಯ್ ಅದನ್ನು ರಕ್ಷಣೆ ಮಾಡಿ ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಹಾಕಿಕೊಂಡು ಕಾಡಿಗೆ ಬೀಡಲು ತೆಗೆದೊಯ್ಯದರು. ಸ್ನೇಕ್ ಜೋಯ್ ಗೆ ಹಾವು ಹಿಡಿಯಲು ಬೆಳ್ತಂಗಡಿ ದ್ವಾರಕ ಡ್ರೈವಿಂಗ್ ಸ್ಕೂಲಿನ ಅಲ್ವಿನ್ , ಲಾಯಿಲ ರವಿಚಂದ್ರ ಸಹಕಾರ ನೀಡಿದರು.
ಘಟನಾ ಸ್ಥಳದಲ್ಲಿ ಐವತ್ತಕ್ಕೂ ಅಧಿಕ ಮಂದಿ ಸೇರಿ ವಾಹನಗಳು ಸಾಲುಗಟ್ಟಿ ನಿಂತಿತ್ತು. ಸ್ಥಳಕ್ಕೆ ಬೆಳ್ತಂಗಡಿ ಪಿಸಿ ಕಿರಣ್ ಹಾಗೂ ಲಾಯಿಲ ಟ್ರಾಫಿಕ್ ಪಿಎಸ್ಐ ಭಾರತಿ ಮತ್ತು ತಂಡ ಜನರನ್ನು ಚದುರಿಸಲು ಮುಂದಾದರೂ ಜನ ಕೊರೊನಾ ಇದೆ ಅನ್ನೋದನ್ನೇ ಮರೆತು ಕಾರಿನ ಸುತ್ತಮುತ್ತ ಅವರಿಸಿದ್ದರು.