ಕಾಸರಗೋಡು: ಕಾಸರಗೋಡು ನಗರದ ಮಾರುಕಟ್ಟೆಯ ಕಾಳಸಂತೆಯಲ್ಲಿ ಮಾರಾಟಕ್ಕೆ ದಾಸ್ತಾನಿಡಲಾಗಿದ್ದ ಸುಮಾರು 150 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಜಿಲ್ಲಾ ನಾಗರಿಕ ಹಾಗೂ ಪೂರೈಕೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಮೀನು ಮಾರುಕಟ್ಟೆ ಪರಿಸರದ ಕಟ್ಟಡವೊಂದರಲ್ಲಿ ನಡೆದಿದ್ದು, ಗೋಣಿ ಚೀಲದಲ್ಲಿ ಪಡಿತರ ಅಕ್ಕಿಯನ್ನು ದಾಸ್ತಾನಿಡಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫಲಾನುಭವಿಗಳಿಗೆ ಉಚಿತವಾಗಿ ಹಾಗೂ ಸಬ್ಸಿಡಿ ದರದಲ್ಲಿ ವಿತರಿಸಬೇಕಿದ್ದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ಇಲ್ಲಿನ ಜಿಲ್ಲಾ ನಾಗರಿಕ ಮತ್ತು ಪೂರೈಕೆ ಅಧಿಕಾರಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿರುತ್ತದೆ. ಆದರೆ ಅಧಿಕಾರಿಗಳಿಗೆ ಮಾಲಕನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಕಾರ್ಯಾಚರಣೆಯಲ್ಲಿ ತಾಲೂಕು ಅಧಿಕಾರಿ ಕೆ.ಪಿ. ಸಜಿಮೋನ್, ಜಿಲ್ಲಾ ನಾಗರಿಕ ಹಾಗೂ ಪೂರೈಕೆ ಪ್ರಭಾರ ಅಧಿಕಾರಿ ಕೆ.ಎನ್.ಬಿಂದು, ಎಂ.ವಿ. ಶೀನಿವಾಸನ್, ಕೆ . ಅಜಯ್ ಕುಮಾರ್, ಕೆ. ಸಂಜಯ್ ಕುಮಾರ್ ಮೊದಲಾದವರು ನೇತೃತ್ವ ನೀಡಿದರು.