ಮಂಗಳೂರು: ಚಾರಣಾಸಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸಂಖ್ಯೆಯನ್ನು ನಿಯಂತ್ರಿಸಲು ಎಲ್ಲ ಚಾರಣ ತಾಣಗಳಿಗೆ ಒಂದೇ ವೆಬ್ಸೈಟ್ ಮೂಲಕ ಅನುಮತಿ ಒದಗಿಸಲು ಮುಂದಾಗಿದೆ. ಈ ಏಕ ವೆಬ್ ಸೈಟ್ ಸಿದ್ಧತೆಯ ಪ್ರಮುಖ ಉದ್ದೇಶ ಪರಿಸರ ಹಾಳಾಗುವುದನ್ನು ತಡೆಗಟ್ಟುವುದಾಗಿದೆ.
ಈಗಾಗಲೇ ರಾಜ್ಯದ ಕೆಲವು ಪ್ರದೇಶಗಳಿಗೆ ಆಯಾ ಅರಣ್ಯ ಪ್ರದೇಶಕ್ಕೆ ಬೇಕಾದಂತೆ ಚಾರಣವನ್ನು ತಮ್ಮದೇ ಆದ ವೆಬ್ಸೈಟ್ಗಳ ಮೂಲಕ ನಿರ್ವಹಿಸಲಾಗುತ್ತಿದೆ.
ಕರ್ನಾಟಕ ಇಕೋ ಟೂರಿಸಂ ಬೋರ್ಡ್ ವೆಬ್ಸೈಟ್ ಮೂಲಕ ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಬೆಂಗಳೂರು, ಕಲಬುರಗಿಯ ಕೆಲವು ಪ್ರವಾಸಿ ತಾಣಗಳಿಗೆ ಮಾತ್ರ ಬುಕಿಂಗ್ ಮಾಡಲಾಗುತ್ತದೆ. ಅಂತೆಯೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮೂಕಾಂಬಿಕಾ ಅಭಯಾರಣ್ಯ ಹಾಗೂ ಸೋಮೇಶ್ವರ ಅಭಯಾರಣ್ಯಗಳನ್ನು ಸೇರಿಸಿ ಕೊಂಡು ಕುದುರೆಮುಖ ನ್ಯಾಶನಲ್ ಪಾರ್ಕ್ವೆಬ್ಸೈಟ್ ಮೂಲಕ ಬುಕಿಂಗ್ ಮಾಡಲಾಗುತ್ತಿದೆ. ಉಳಿದಂತೆ ಜಿಲ್ಲೆಯ ಪ್ರಮುಖ ಚಾರಣ ತಾಣ ಕುಮಾರ ಪರ್ವತ, ಶಿರಾಡಿ, ಚಾರ್ಮಾಡಿ, ಬಿಸಿಲೆ ಘಾಟಿಯ ಲ್ಲಿರುವ ಹತ್ತು ಹಲವು ಗುಡ್ಡಗಳು, ಜಲಪಾತ ಗಳಿಗೆ ಪ್ರಸ್ತುತ ಯಾವುದೇ ಆನ್ಲೈನ್ ಅನುಮತಿ ವ್ಯವಸ್ಥೆ ಇಲ್ಲ.
ಕುಮಾರಪರ್ವತದಲ್ಲಿ ಇತ್ತೀಚೆಗೆ ಸೇರಿದ್ದ 2 ಸಾವಿರಕ್ಕೂ ಅಧಿಕ ಚಾರಣಿಗರಿಂದಾಗಿ ಇಲ್ಲಿನ ಸಮಸ್ಯೆ ಅರಣ್ಯ ಸಚಿವರ ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ಎಲ್ಲಾ ಚಾರಣ ತಾಣಗಳಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.