ಬಂಟ್ವಾಳ; ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಸರಳತೆ ಮೆರೆದಿದ್ದಾರೆ.
ಇಂದು ಬೆಳಗ್ಗೆ 10.30 ಗಂಟೆಯ ವೇಳೆ ಬೆಂಗಳೂರಿಗೆ ತೆರಳುತ್ತಿದ್ದ ಸಚಿವರು ದಾರಿ ಮಧ್ಯೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತೆರಳಿ, ಸಾಮಾನ್ಯರಂತೆ ಸಾಲಿನಲ್ಲಿ ನಿಂತು ವೈದ್ಯರ ಬಳಿ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.ಆಡಳಿತ ವೈದ್ಯಾಧಿಕಾರಿ ಡಾ| ಪುಷ್ಪಲತಾ ಅವರು ಕಚೇರಿಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವಿನಂತಿಸಿದರೂ, ಅವರು ವಿನಂತಿಯನ್ನು ನಿರಾಕರಿಸಿ , ರೋಗಿಗಳ ಜೊತೆಗೇ ಪರೀಕ್ಷೆ ಮಾಡಿಸಿಕೊಂಡು ,ಸರಳತೆ ತೋರಿದ್ದಾರೆ.
ಅವರು ಇಂದು ತುರ್ತಾಗಿ ಬೆಂಗಳೂರಿನಲ್ಲಿ ನಡೆಯುವ ಮೀಟಿಂಗ್ ನಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ದಾರಿ ಮಧ್ಯೆ ಸರಕಾರಿ ಆಸ್ಪತ್ರೆಗೆ ತೆರಳಿ ಹೆಲ್ತ್ ಚೆಕಪ್ ಮಾಡಿಸಿಕೊಂಡಿದ್ದಾರೆ.ಕಳೆದ ಕೆಲ ದಿನಗಳಿಂದ ಕಾರ್ಯಕ್ರಮದ ಒತ್ತಡ ಹಾಗೂ ಸರಿಯಾಗಿ ನಿದ್ರೆಯಿಲ್ಲದ ಕಾರಣ ಇವರಿಗೆ ತಲೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.ವೈದ್ಯರು ಪರೀಕ್ಷೆ ನಡೆಸಿ ರಕ್ತದೊತ್ತಡ ನಾರ್ಮಲ್ ಎಂದು ತಿಳಿಸಿದ್ದಾರೆ.ಬಳಿಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.