ಮೈಸೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಏಪ್ರಿಲ್ ಬಳಿಕ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್ ಯಡಿಯೂರಪ್ಪರನ್ನ ತೆಗೆಯುತ್ತಾರೆ. ಈ ಕುರಿತು ತಮಗೆ ಆರ್ಎಸ್ಎಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ ಎಂದು ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನನಗೆ ಆರ್.ಎಸ್.ಎಸ್.ಮೂಲಗಳಿಂದ ಖಚಿತ ಮಾಹಿತಿ ಬಂದಿದ್ದು, ಯಡಿಯೂರಪ್ಪನವರನ್ನು ಏಪ್ರಿಲ್ ಬಳಿಕ ಅಧಿಕಾರದಿಂದ ಕೆಳಗಿಳಿಸಲಾಗುತ್ತಿದೆ. ಅಮಿತ್ ಶಾ ಯಡಿಯೂರಪ್ಪ ಮುಂದುವರೆಯಲಿದ್ದಾರೆ ಎಂದಿದ್ದಾರೆ. ಮತ್ತಿನ್ನೇನು, ಅಮಿತ್ ಶಾ ರಾಜ್ಯಕ್ಕೆ ಬಂದು ಸಿಎಂ ಬದಲಾವಣೆ ಆಗ್ತಾರೆ ಅಂತ ಹೇಳ್ತಾರಾ? ಎಂದು ಮಾದ್ಯಮದವರನ್ನೇ ಪ್ರಶ್ನಿಸಿದರು.
ಯಾವುದೇ ಪಾರ್ಟಿಯ ಹೈಕಮಾಂಡ್ ಆದ್ರೂ ತೆಗೆಯುತ್ತೇನೆಂದು ಹೇಳಲ್ಲ. ಹೈಕಮಾಂಡ್ ತೆಗೆಯುತ್ತೇನೆ ಅಂದ್ರೆ ಸರ್ಕಾರ ನಡೆಯುತ್ತಾ..? ಕೆಲಸ ಮಾಡೋಕಾಗುತ್ತಾ..? ಅವರು ಆ ರೀತಿ ಹೇಳಬಹುದು, ಆದರೆ ನನಗಿರುವ ಮಾಹಿತಿ ಬೇರೆ. ಏಪ್ರಿಲ್ ಬಳಿಕ ಸಿಎಂ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪರನ್ನು ತೆಗೆಯಲಾಗುತ್ತದೆ. ನನಗೆ ಆರ್ ಎಸ್ಎಸ್ ಮೂಲಗಳಿಂದ ಮಾಹಿತಿ ಬಂದಿದೆ ಎಂದು ಹೇಳಿದರು.