ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ. ಜಯಲಲಿತಾ ಅತ್ಯಾಪ್ತೆ ಶಶಿಕಲಾ ನಟರಾಜನ್ ಅವರ ಶಿಕ್ಷಾವಧಿ ಜನವರಿ ಅಂತ್ಯಕ್ಕೆ ಕೊನೆಯಾಗಲಿದೆ,
ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಶಶಿಕಲಾ ಅವರಿಗೆ ವಿಐಪಿ ಸತ್ಕಾರ ನೀಡಲಾಗುತ್ತಿದೆ ಎಂಬ ಬಗ್ಗೆ ಅನೇಕ ಬಾರಿ ಆರೋಪಘಲು ಕೇಳಿ ಬಂದಿದ್ದವು. ಆದರೆ ಚಿನ್ನಮ್ಮ ಇವುಗಳೆಲ್ಲದರ ನಡುವೆ ಕನ್ನಡಿಗರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಹೌದು.. ಶಶಿಕಲಾ ಅವರು ಜೈಲಿನಲ್ಲಿ ಕನ್ನಡ ಕಲಿತಿದ್ದಾರೆ. ಜೊತೆಗೆ ತೋಟಗಾರಿಕೆ, ಕರಕುಶಲ ಕಲೆಗಳನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಇನ್ನು ಜೈಲಿನಲ್ಲಿ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಉದ್ದೇಶದಿಂದ ನಲಿ-ಕಲಿ ಯೋಜನೆ ಅಡಿಯಲ್ಲಿ ನಿತ್ಯ ಶಿಕ್ಷಕರು ಬರುತ್ತಾರೆ. ಅವರ ಮೂಲಕ ಕನ್ನಡ ಭಾಷೆ ಕಲಿತಿರುವ ಚಿನ್ನಮ್ಮ, ಕನ್ನಡ ಬರೆಯುವುದು, ಓದುವುದನ್ನು ಅಭ್ಯಾಸ, ಮಾಡಿ ಕೊಂಡಿದ್ದಾರೆ. ಕನ್ನಡದಲ್ಲಿ ಯಾರೇ ಮಾತನಾಡಿದರೂ ಅದನ್ನು ಅರ್ಥೈಸಿಕೊಂಡು ಕನ್ನಡದಲ್ಲೇ ಉತ್ತರ ನೀಡುತ್ತಾರೆ. ಈ ಮೂಲಕ ಕನ್ನಡದ ಮೂರನೇ ತರಗತಿ ಉತ್ತೀರ್ಣರಾಗಿದ್ದಾರೆ.
ಅಲ್ಲದೇ ಜೈಲಿನಲ್ಲಿರುವ ಅವರ ಸಂಬಂಧಿ ಜೆ.ಇಳವರಸಿ ಕೂಡ ಕನ್ನಡ ಭಾಷೆಯನ್ನು ಕರಗತ ಮಾಡಿಕೊಂಡು, ಸ್ಪಷ್ಟವಾಗಿ ಮಾತನಾಡುತ್ತಾರೆ ಹಾಗೂ ನಿತ್ಯ ದೇವರ ಹಾಡುಗಳನ್ನು ಹಾಡುತ್ತಾರೆ. ವಿಶೇಷ ಕಾರ್ಯಕ್ರಮಗಳಲ್ಲೂ ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಾರೆ. ಕನ್ನಡ ಬರೆಯುವುದನ್ನು ಕಲಿತುಕೊಂಡಿದ್ದಾರೆ.
ಇದರ ಜೊತೆಗೆ ಸಾಮಾನ್ಯ ಮಹಿಳೆಯಂತೆ ಟೈಲರಿಂಗ್, ಎಂಬ್ರಾಯಿಡರಿ, ಕಂಪ್ಯೂಟರ್, ಕನ್ನಡ ಕಲಿಯುತ್ತ, ಆಕರ್ಷಕವಾದ ಬಳೆಗಳು, ಕಿವಿಯೋಲೆ ತಯಾರಿಸಿದ್ದಾರೆ. ತೋಟದಲ್ಲಿ ಸಹ ಕೈದಿಗಳ ಜತೆ ಸೇರಿ ಕಲ್ಲಂಗಡಿ, ಅಣಬೆ, ಸೊಪ್ಪು, ತರಕಾರಿ ಬೆಳೆದಿದ್ದಾರೆ. ನಿತ್ಯ ಬೆಳಗ್ಗೆ 6.30ರ ಸುಮಾರಿಗೆ ಏಳುವ ಶಶಿಕಲಾ, ತಮ್ಮ ಕೊಠಡಿಯ ಮುಂಭಾಗದಲ್ಲಿರುವ ಪಡಸಾಲೆಯನ್ನು ಗುಡಿಸುತ್ತಾರೆ. ಬಳಿಕ ಬ್ಯಾರಕ್ ಕೊಠಡಿಯಲ್ಲಿನ ದೇವರ ಪೂಜೆ ನೆರವೇರಿಸುತ್ತಾರೆ. ನಂತರ ತಮ್ಮ ಸಂಬಂಧಿ ಇಳವರಸಿ ಹಾಗೂ ಇತರ ಜತೆ ಸೇರಿ ಉಪಾಹಾರ ಸೇವಿಸಿ ಬ್ಯಾರಕ್ಗೆ ಮರಳುತ್ತಾರೆ. ಈ ಮಧ್ಯೆ ಜೈಲಿನ ಶಾಲೆಗೆ ಹೋಗಿ ಕಂಪ್ಯೂಟರ್, ಕನ್ನಡ ಕಲಿಕೆ ಹಾಗೂ ದಿನಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆ ಮೂಲಕ ಜೈಲಿನಲ್ಲಿ ಸಂಪೂರ್ಣವಾಗಿ ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.