ಬೆಳ್ತಂಗಡಿ: ತಾಲೂಕಿನ ಕಳಂಜ ಗ್ರಾಮದ ಬಳ್ಕಾಜೆ ಎಂಬಲ್ಲಿ ತೋಟದ ಕೆಲಸಕ್ಕೆಂದು ಬರುತ್ತಿದ್ದ ದಲಿತ ಮಹಿಳೆಗೆ ಬಲವಂತವಾಗಿ ಆಸಿಡ್ ಕುಡಿಸಿ ಕೊಲೆ ಮಾಡಿ ನಂತರ ಮಹಿಳೆಯ ಅಪ್ರಾಪ್ತ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಾರ್ಮಾಡಿ ಮೂಲದ ಪರಿಶಿಷ್ಟ ಪಂಗಡಕ್ಕೆ ಜಾತಿಗೆ ಸೇರಿದ ಮಹಿಳೆ ಕಳೆಂಜ ಗ್ರಾಮದ ಬಳ್ಕಾಜೆ ನಿವಾಸಿ ರೆಜಿಮೊನು ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಕೆಲವೊಮ್ಮೆ ಮಹಿಳೆಯ ಅಪ್ರಾಪ್ತ ಮಗಳು ಸಹ ತಾಯಿ ಜೊತೆ ತೋಟಕ್ಕೆ ಹೋಗುತ್ತಿದ್ದಳು. ಕೆಲಸದ ದೃಷ್ಟಿಯಿಂದ ಅಲ್ಲಿ ಎರಡು ಮೂರು ದಿವನಸಗಳ ಕಾಲ ಇರುತ್ತಿದ್ದರು. ಅದರಂತೆ ಮೇ ತಿಂಗಳಲ್ಲಿ ರೆಜಿಮೊನುರವರ ತೋಟಕ್ಕೆ ಹೋಗಿದ್ದ ಸಮಯದಲ್ಲಿ ರೆಜಿಮೋನು ಮತ್ತು ಆತನ ಸ್ನೇಹಿತ ಕೃಷ್ಣನ ಜೊತೆ ಸೇರಿ ದಲಿತ ಮಹಿಳೆಗೆ ಬಲಾತ್ಕಾರವಾಗಿ ಆಸಿಡ್ ಕುಡಿಸಿ ಕೊಲೆ ಮಾಡಿ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಹಾಗೆಯೆ ಮಹಿಳೆಯ ಜೊತೆ ಇದ್ದ 14 ವರ್ಷದ ಅಪ್ರಾಪ್ತ ಬಾಲಕಿಗೆ ಆರೋಪಿ ರೆಜಿಮೊನು ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆರೋಪಿ ಕುಡಿದು ಬಂದು ಕೈಯಿಂದ ಹೊಡೆಯುತ್ತಿದ್ದನು. ಅಲ್ಲದೆ ಎದೆಯ ಭಾಗ ಹಾಗೂ ಮುಟ್ಟಬಾರದ ಸ್ಥಳವನ್ನು ಮುಟ್ಟುತ್ತಿದ್ದನು. ಅಲ್ಲದೆ ರೆಜಿಮೊನು ಮನೆಯಲ್ಲಿ ಕೆಲಸಕ್ಕಿದ್ದ ಕೃಷ್ಣ ಎಂಬಾತನು ಈ ವಿಷಯವನ್ನು ಬೇರೆಯವರಿಗೆ ಹೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಲತಿಂಗಳ ಹಿಂದೆಯೇ ದಲಿತ ಮಹಿಳೆ ಮೃತಪಟ್ಟಿದ್ದು, ನಂತರ ಮಾನಸಿಕವಾಗಿ ನೊಂದಿದ್ದ ಬಾಲಕಿ ಇದೀಗ ನಡೆದ ಎಲ್ಲ ಘಟನೆಗಳನ್ನು ಅಣ್ಣ ಹಾಗೂ ಚಿಕ್ಕಮ್ಮರವರಿಗೆ ತಿಳಿಸಿದ್ದಾಳೆ. ಬಾಲಕಿಯ ಹೇಳಿಕೆಯ ಅನುಸಾರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ 354, 323, 504, 506 ಜೊತೆಗೆ 34 ಐಪಿಸಿ ಮತ್ತು ಕಲಂ 8 ಪೊಕ್ಸೊ ಕಾಯ್ದೆ 2012 ಮತ್ತು ಕಲಂ 3(1)(w)(i), 3(2)(v)(a) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ 2015 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಪೊಲೀಸ್ ಠಾಣೆಯ ಎಸ್.ಐ ಪವನ್ ನಾಯಕ್ ನೇತೃತ್ವದ ತಂಡ ಆರೋಪಿಗಳಾದ ರೆಜಿಮೋನು ಮತ್ತು ಕೃಷ್ಣನನ್ನ ಬಂಧಿಸಿದ್ದಾರೆ.