ಬೆಂಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತ್ಯಾಗರಾಜನಗರದಲ್ಲಿರುವ ಖಾಸಗಿ ಶಾಲೆಯ ಮುಖ್ಯಸ್ಥನೋರ್ವ ಶಿಕ್ಷಕಿ ಸೇರಿದಂತೆ ಹಲವು ಹೆಣ್ಣು ಮಕ್ಕಳಿಗೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡುವುದರ ಜೊತೆಗೆ ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ದೌರ್ಜನ್ಯ ಎಸಗಿದ್ದಾರೆ ಎಂದು ಶಿಕ್ಷಕಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಈ ಬಗ್ಗೆ ಲೈಂಗಿಕ ದೌರ್ಜನ್ಯ ಆರೋಪದಡಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಗುರಪ್ಪ ನಾಯ್ಡು ಎನ್ನಲಾಗಿದೆ.
ಈತನ ವಿರುದ್ಧ ನ.26ರಂದು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ನೀಡಿರುವ, ‘ಆರೋಪಿ ಗುರಪ್ಪ ನಾಯ್ಡು ಹೆಣ್ಣು ಮಕ್ಕಳ ಬೆತ್ತಲೆ ಹಾಗೂ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡು ಹೆದರಿಸುತ್ತಿದ್ದಾರೆ. ನಾನು ಹೇಳಿದಂತೆ ಕೇಳದಿದ್ದರೆ ವಿಡಿಯೊಗಳನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ,’ ಎನ್ನುವ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ತ್ಯಾಗರಾಜನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ದೂರುದಾರ ಶಿಕ್ಷಕಿ ಸೇರಿ 75ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಈತನ ವಿರುದ್ಧ ದೂರು ನೀಡಲು ಕೆಲವು ಶಿಕ್ಷಕಿಯರು ಹಾಗೂ ಸಿಬ್ಬಂದಿ ನಿರ್ಧಾರ ಮಾಡಿದ್ದೆವು. ಆದರೆ, ಗುರಪ್ಪ ನಾಯ್ಡು ಪ್ರಭಾವಿ ಹಾಗೂ ಹಣವಂತ ಎಂದು ತಿಳಿದು ಸುಮ್ಮನಿದ್ದೆವು. 2021ರಿಂದ 2023ರ ರವರೆಗೆ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಆ ವೇಳೆಯಲ್ಲಿ ಉದ್ದೇಶಪೂರ್ವಕವಾಗಿ ಅವರ ಕಚೇರಿಗೆ ಕರೆಯುವುದು, ಯಾವಾಗ ರೆಡಿ ಆಗುತ್ತೀಯಾ ಎಂದು ಕೇಳುವುದು, ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದರು. ಅವರ ವರ್ತನೆಯಿಂದ ಸಾಕಷ್ಟು ಮಾನಸಿಕ ಕಿರುಕುಳ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ಧಾರೆ.