ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಹಿರಿಯ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಷಾ ಗಿಲಾನಿ ಹುರಿಯತ್ ಕಾನ್ಫರೆನ್ಸ್ನಿಂದ ಹೊರಬಂದಿದ್ದಾರೆ.
ಹುರಿಯತ್ ಕಾನ್ಫರೆನ್ಸ್ ವೇದಿಕೆಯಲ್ಲಿ ಇತ್ತೀಚೆಗೆ ಕಂಡುಬಂದಿರುವ ಬೆಳವಣಿಗೆ, ಭಿನ್ನಾಭಿಪ್ರಾಯಗಳು ಮತ್ತು ಕೆಲವು ಅಹಿತಕರ ಚಟುವಟಿಕೆಗಳಿಂದ ಬೇಸತ್ತು ತಾವು ಈ ಸಂಘಟನೆಯಿಂದ ಹೊರಬಂದಿರುವುದಾಗಿ ಪತ್ರ ಮತ್ತು ಆಡಿಯೋ ಮೂಲಕ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಆರ್ಟಿಕಲ್ 370 ಹಿಂಪಡೆದ ನಂತರ ಹುರಿಯತ್ ಕಾನ್ಫರೆನ್ಸ್ಗೆ ಕಟ್ಟು ನಿಟ್ಟಿನ ಕಡಿವಾಣವನ್ನು ಕೇಂದ್ರ ಸರ್ಕಾರ ಹಾಕಿದೆ. ಹೀಗಾಗಿ ಸಜವಾಗಿ ಅದು ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳಿಸುವಲ್ಲಿ ಆಗಿರಬಹುದು, ಕಲ್ಲು ತೂರಾಟ ನಡೆಸುವಲ್ಲಿ ಆಗಿರಬಹುದು ಅಥವಾ ಭಾರತದ ವಿರುದ್ಧ ಆಕ್ರೋಶ ಹುಟ್ಟು ಹಾಕುವಲ್ಲಿ ಇರಬಹುದು ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಹುರಿಯತ್ನ ಅಧ್ಯಕ್ಷನಾಗಿದ್ದ ಗಿಲಾನಿ ವಿರುದ್ಧ ಪಾಕಿಸ್ತಾನ ಕೆಂಡ ಕಾರಿದ್ದರೆ, ಮತ್ತೊಂದೆಡೆ ಹುರಿಯತ್ ಅಸ್ತಿತ್ವಕ್ಕೂ ಸಂಚಾರ ಬಂದೊದಗಿದೆ. ಹೀಗಾಗಿ ಇತ್ತೀಚೆಗೆ ಬಹಳ ಸೈಲೆಂಟ್ ಆಗಿದ್ದ ಗಿಲಾನಿ, ತಮ್ಮ ರಾಜಿನಾಮೆ ವಿವರಿಸಿ ಒಂದು ಆಡಿಯೋ ಮೆಸೆಜ್ ಕೂಡಾ ಮಾಡಿದ್ದಾರೆ.
90 ವರ್ಷದ ಗಿಲಾನಿ 2003ರಲ್ಲಿ ಹುರಿಯತ್ ಕಾನ್ಫರೆನ್ಸ್ ವೇದಿಕೆಯನ್ನು ಸ್ಥಾಪಿಸಿದ್ದರು. ಈ ಪ್ರತ್ಯೇಕವಾದಿ ಸಂಘಟನೆಯ ಸಂಸ್ಥಾಪಕರಾದ ಇವರು ಅಜೀವ ಅಧ್ಯಕ್ಷರಾಗಿ ಮುಂದುವರೆದಿದ್ದರು.
ಈಗ ಈ ಸಂಘಟನೆಯಿಂದ ಗಿಲಾನಿ ಹೊರಬಂದಿರುವುದು ಹುರಿಯತ ಕಾನ್ಫರೆನ್ಸ್ಗೆ ಭಾರೀ ಆಘಾತ ನೀಡಿದೆ. ಪ್ರತ್ಯೇಕತಾ ವಾದಿಗಳನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿರುವ ಸಂದರ್ಭದಲ್ಲೇ ಕಂಡುಬಂದಿರುವ ಈ ಬೆಳವಣಿಗೆ ಕಾಶ್ಮೀರದಲ್ಲಿ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿರುವವರಿಗೆ ಮತ್ತೊಂದು ಹೊಡೆತವಾಗಿದೆ.