ಬೆಂಗಳೂರು : ಭಾರತೀಯ ಚಿತ್ರರಂಗಕ್ಕೆ ಈ ವರ್ಷ ಅತ್ಯಂತ ಕೆಟ್ಟ ವರ್ಷ. ಅದೆಷ್ಟು ಪ್ರತಿಭಾವಂತರನ್ನು ಭಾರತೀಯ ಸಿನಿಮಾ ರಂಗ ಕಳೆದುಕೊಂಡಿದೆ ಅನ್ನೋದು ನೀವೆಲ್ಲಾ ಗಮನಿಸಿದ್ದೀರಿ. ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಈ ವರ್ಷ ಕರಾಳ ವರ್ಷ. ಒಬ್ಬೊಬರ ಹಿಂದೆ ಒಬ್ಬರನ್ನು ಕಳೆದುಕೊಳ್ಳುತ್ತಲೇ ಇದೆ ಇದೆ.ಇದೀಗ ಕನ್ನಡ ಚಿತ್ರರಂಗ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರನ್ನು ಕಳೆದುಕೊಂಡಿದೆ.
ಕನ್ನಡದ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ತುಳು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿ ಮನೆ ಮಾತಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ರಾಜನ್ (87) ಅವರು ನಿನ್ನೆ ರಾತ್ರಿ 10.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜನ್ ಅವರು ಹೃದಯಾಘಾತದಿಂದ ಮನೆಯಲ್ಲೇ ನಿಧನರಾಗಿದ್ದಾರೆ. ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ಸಂಜೆ ಹೆಬ್ಬಾಳದ ಸ್ಮಶಾನದಲ್ಲಿ ನೆರವೇರಲಿದೆ. ರಾಜನ್ ಅವರು ಮೂಲತಃ ಮೈಸೂರಿನವರು.
ಸಹೋದರ ನಾಗೇಂದ್ರ ಜತೆ ಸಂಗೀತ ಸಂಯೋಜನೆ ಮಾಡುತ್ತಿದ್ದರಿಂದ ರಾಜನ್- ನಾಗೇಂದ್ರ ಅಂತಲೇ ಹೆರಸಾಗಿದ್ದರು. 1950ರಿಂದ 1990ರವರೆಗೆ ರಾಜನ್ ನಾಗೇಂದ್ರ ಜೋಡಿ ಮೋಡಿ ಮಾಡಿತ್ತು.
375ಕ್ಕೂ ಅಧಿಕ ಸಿನಿಮಾಗಳಿಗೆ ಮ್ಯೂಸಿಕ್ ಕಂಫೋಸ್ ಮಾಡಿದ್ದಾರೆ. ಕನ್ನಡದ ಜತೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ತುಳು ಸಂಗೀತ ಸಂಯೋಜಿಸಿದ್ದಾರೆ. ಶ್ರೀಲಂಕಾದಲ್ಲಿನ ಸಿನ್ಹಳ ಭಾಷೆಯ ಸಿನಿಮಾಗಳಿಗೂ ಸ್ವರ ಸಂಯೋಜಿಸಿದ್ದಾರೆ.
ಕನ್ನಡದಲ್ಲೇ ಬರೋಬ್ಬರಿ 200ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಎರಡು ಕನಸು, ಪರಸಂಗದ ಗೆಂಡೆತಿಮ್ಮ, ಪಂತುಲಮ್ಮ ಚಿತ್ರಗಳಿಗೆ ರಾಜನ್ ರಾಜ್ಯ ಪ್ರಶಸ್ತಿ ಪಡೆದಿದ್ದರು.