ಪುತ್ತೂರು: ಕೊರೊನಾ ಭೀತಿಯಿಂದ ದೇಶದಲ್ಲಿ ಲಾಕ್ಡೌನ್ ಜಾರಿಗೊಂಡಿದ್ದು, ಆಹಾರ ವಸ್ತುಗಳು ಜನತೆಗೆ ಅಪರೂಪವಾಗುತ್ತಿರುವ ನಡುವೆಯೇ ದಿನಸಿ ಅಂಗಡಿ ಹಾಗೂ ತರಕಾರಿ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಮಧ್ಯಾಹ್ನದವರೆಗೆ ಅಗತ್ಯ ವಸ್ತುಗಳ ಖರೀದಿಗೂ ಅವಕಾಶ ಕಲ್ಪಿಸಲಾಗಿದೆ.
ಬಡಜನತೆಯ ತುತ್ತು ಅನ್ನದ ಬವಣೆ ನೀಗಿಸಲು ದಾನಿಗಳು ಹಾಗೂ ಜನಪ್ರತಿನಿಧಿಗಳು ಆಹಾರ ಸಾಮಗ್ರಿಗಳ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಆದರೆ ಮಧ್ಯಮ ವರ್ಗದ ಜನತೆ ತಮ್ಮ ಆಹಾರ ವಸ್ತುಗಳಿಗಾಗಿ ದಿನಸಿ ಹಾಗೂ ತರಕಾರಿ ಅಂಗಡಿಗಳನ್ನೇ ಆಶ್ರಯಿಸಬೇಕಾಗಿದೆ. ಈ ಅಂಗಡಿಗಳಲ್ಲಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಪ್ರತಿ ವಸ್ತುವಿನ ಬೆಲೆಯೂ 50ರಿಂದ 60ರಷ್ಟು ಹೆಚ್ಚಾಗಿದೆ.
ಇಂತಹ ಸ್ಥಿತಿಯ ನಡುವೆಯೂ ಪುತ್ತೂರಿನ ದರ್ಬೆ ಬಳಿಯಲ್ಲಿರುವ`ಅಕ್ಕ ವೆಜಿಟೇಬಲ್ & ಫ್ರೂಟ್ಸ್’ ಅಂಗಡಿಯಲ್ಲಿ ಮಾತ್ರ ಜನತೆಯ ಕೈಗೆಟಕುವ ದರದಲ್ಲಿ ತರಕಾರಿ ನೀಡಲಾಗುತ್ತಿದೆ. ಹಾಸನ, ಮೈಸೂರು ಹಾಗೂ ಸ್ಥಳೀಯ ಜನತೆಯಿಂದ ಬಗೆ ಬಗೆಯ ತರಕಾರಿಗಳನ್ನು ಖರೀದಿಸಿ ಈ ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆಯುವ ತರಕಾರಿಗಳೂ ಲಭ್ಯವಾಗುತ್ತಿವೆ. ತರಕಾರಿ ಬೆಳೆಗಾರರ ಮನೆಯಿಂದ ನೇರ ಅಂಗಡಿಗೆ, ಅಂಗಡಿಯಿಂದ ಗ್ರಾಹಕರ ಮನೆಗೆ ಪಕ್ಕಾ ತರಕಾರಿಗಳನ್ನು ಒಯ್ಯುವ ಈ ವ್ಯವಸ್ಥೆಯನ್ನು ಅಬ್ದುಲ್ ರಝಾಕ್ ಬಪ್ಪಳಿಗೆ ನಡೆಸುತ್ತಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ತರಕಾರಿ ಪೂರೈಕೆ ಮಾಡುವ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದ್ದೇನೆ. ಗ್ರಾಹಕರು ತಮಗೆ ಬೇಕಾದ ತರಕಾರಿಗಳನ್ನು ಅವರೇ ಆಯ್ದುಕೊಳ್ಳುವ ವ್ಯವಸ್ಥೆ ಪುತ್ತೂರಿನ ತರಕಾರಿ ಅಂಗಡಿಗಳಲ್ಲಿ ಇಲ್ಲಿ ಮಾತ್ರ ಇದೆ. ಜನತೆಗೆ ಸಹಾಯ ಮಾಡುವ ಹಿನ್ನೆಲೆಯಲ್ಲಿ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದ್ದೇನೆ ಎನ್ನುವುದು ಅಬ್ದುಲ್ ರಝಾಕ್ ಬಪ್ಪಳಿಗೆ ಅಭಿಪ್ರಾಯ