ಬೆಳ್ತಂಗಡಿ : ದಾಖಲೆಗಳಿಲ್ಲದ 10 ಲಕ್ಷ ರೂಪಾಯಿ ಸಾಗಾಟ ಮಾಡುತ್ತಿದ್ದ ಎ.ಟಿ.ಎಂ ವಾಹನವನ್ನು ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ.10 ರಂದು ರಾತ್ರಿ 10 ಗಂಟೆಗೆ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.ಇದೀಗ ಸೂಕ್ತ ದಾಖಲೆ ನೀಡಿ ಹಣವನ್ನು ಎಟಿಎಂ ಕಂಪನಿಯವರು ವಾಪಸ್ ಪಡೆದುಕೊಂಡಿದ್ದಾರೆ.
ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆ ಪೂಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರತರಾಗಿದ್ದ ಫ್ಲೈಯಿಂಗ್ ಸ್ಕ್ವಾಡ್ ಕಾರ್ತಿ ಮಧುಬಾಬು ಅವರ ತಂಡ ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ KA-53-C-2542 ಸಂಖ್ಯೆಯ ವಾಹನದಲ್ಲಿ ದಾಖಲೆಗಳಿಲ್ಲದ 10 ಲಕ್ಷ ರೂಪಾಯಿ ಮೊತ್ತವನ್ನು ರಾತ್ರಿ ಸುಮಾರು 10 ಗಂಟೆ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು.
ಎಟಿಎಂ ಕಂಪನಿಯವರು ಸೂಕ್ತ ದಾಖಲೆ ನೀಡಿದ್ದು ಎ.19 ರಂದು ಸಂಜೆ ವಶದಲ್ಲಿದ್ದ 10 ಲಕ್ಷ ಹಣವನ್ನು ಬೆಳ್ತಂಗಡಿ ಖಜಾನೆಯ ಭದ್ರತಾ ಕೊಠಡಿಯಿಂದ ಚುನಾವಣಾಧಿಕಾರಿ ಇಓ ಕುಸುಮಾಧರ್ ಮತ್ತು ಸಿಬ್ಬಂದಿ ಎಟಿಎಂ ಕಂಪನಿಯವರಿಗೆ ವಾಪಸ್ ನೀಡಿದ್ದಾರೆ.