ಮಂಗಳೂರು : ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಕಳೆದ ವಾರ ನಡೆದ ಎಸ್ಡಿಪಿಐ ಕಾರ್ಯಕ್ರಮಕ್ಕೆ ಬೈಕ್ನಲ್ಲಿ ತೆರಳುವಾಗ ಪೊಲೀಸರನ್ನು ಎಸ್ಡಿಪಿಐ ಕಾರ್ಯಕರ್ತರು ನಿಂದಿಸಿದ್ದಾರೆ ಎನ್ನಲಾದ ವೀಡಿಯೊವನ್ನು ತಿರುಚಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ ಎಂದು ಆರೋಪಿಸಿ ಎಸ್ಡಿಪಿಐ ಮಂಗಳೂರು ನಗರ ಸಮಿತಿ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಕಾವೂರು ಪೊಲೀಸ್ ಠಾಣೆಯ ಸಿಬ್ಬಂದಿ ರಾಘವ ಎಂಬವರ ವಿರುದ್ಧ ವೀಡಿಯೊ ತಿರುಚಿ ವಾಟ್ಸಾಪ್ ಸ್ಟೇಟಸ್ ಹಾಕಿದ ಆರೋಪ ಹೊರಿಸಲಾಗಿದೆ. ಪೊಲೀಸರ ವಿರುದ್ಧ ಘೋಷಣೆ ಕೂಗಲಾಗಿದೆ ಎನ್ನಲಾದ ವೀಡಿಯೋವನ್ನು ತಿರುಚಿ ತನ್ನ ಸ್ಟೇಟಸ್ನಲ್ಲಿ ಸಿಬ್ಬಂದಿ ಹಾಕಿರುವುದನ್ನು ಗಮನಿಸಿದ ಎಸ್ಡಿಪಿಐ ಕಾರ್ಯಕರ್ತ ಮುಹಮ್ಮದ್ ಶರೀಫ್ ಈ ಸಂಬಂಧ ಸ್ಟೇಟಸ್ ಅಪ್ಲೋಡ್ ಮಾಡಿದ ದಾಖಲೆಯೊಂದಿಗೆ ದೂರನ್ನು ನೀಡಿದ್ದಾರೆ.
ಎಸ್ಡಿಪಿಐ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕೆಲವು ಯುವಕರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಬಂಧಿಸಲಾಗಿತ್ತು. ಈ ಕುರಿತಾದ ವೀಡಿಯೋವನ್ನು ತಿರುಚಿ ಸಿಬ್ಬಂದಿ ರಾಘವ ತನ್ನ ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ. ಈ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಸಿಬ್ಬಂದಿಯ ವರ್ತನೆಯು ಪೂರ್ವಗ್ರಹ ಪೀಡಿತ ಮತ್ತು ಕಾನೂನು ಬಾಹಿರವಾಗಿದೆ ಎಸ್ಡಿಪಿಐ ನೀಡಿದ ದೂರಿನಲ್ಲಿ ತಿಳಿಸಿದೆ.